ಹಿರಿಯ ವಿದ್ವಾಂಸ, ಸಮಸ್ತ ನೇತಾರ ಡಾ. ಶಾಹ್ ಮುಸ್ಲಿಯಾರ್ ನಿಧನ
ಕಡಬ: ಹಿರಿಯ ಧಾರ್ಮಿಕ ವಿದ್ವಾಂಸ, ಸಮಸ್ತ ನೇತಾರ ಡಾ. ಶಾಹ್ ಮುಸ್ಲಿಯಾರ್ (87) ಅವರು ಬುಧವಾರ ಬೆಳಗ್ಗೆ ತಮ್ಮ ಸ್ವಗೃಹದಲ್ಲಿ ನಿಧನರಾದರು.
ಸುಮಾರು 32 ವರ್ಷಗಳ ಕಾಲ ಸುಳ್ಯ ಆರಂತೋಡು ಮಸೀದಿಯಲ್ಲಿ ಮುದರ್ರಿಸ್ ಆಗಿ ಹಾಗು ಆತೂರು ಬದ್ರಿಯಾ ಜುಮಾ ಮಸೀದಿಯಲ್ಲಿ ಕೆಲ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು.
ಕನ್ನಡ ಪಾಂಡಿತ್ಯವನ್ನು ಹೊಂದಿದ್ದ ಇವರು ಸುಮಾರು 20 ವರ್ಷಗಳ ಕಾಲ ಸರಳಪಥ ಮತ್ತು ಅಲಮುಲ್ ಹುದಾ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸಹಕಾರಿ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದ ಇವರು 1966ರಲ್ಲಿ ಕೊಯಿಲ ಸಹಕಾರಿ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಮೃತರು ಪುತ್ರ, ಪುತ್ರಿಯರು, ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಸಂತಾಪ
ಹಿರಿಯ ವಿದ್ವಾಂಸ ಶಾಹ್ ಉಸ್ತಾದ್ ನಿಧನಕ್ಕೆ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ನಾಯಕ ಕೆಮ್ಮಾರ ಜಾಫರ್ ಸಾಧಿಕ್ ಫೈಝಿ ಸಂತಾಪ ವ್ಯಕ್ತಪಡಿಸಿದ್ದಾರೆ.
ಉಸ್ತಾದ್ ರವರ ಹೆಚ್ಚಿನ ಕಾಲ ಸುಳ್ಯ ಅರಂತೋಡ್ ಕೇಂದ್ರವಾಗಿಸಿಕೊಂಡು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲಿ ಮುಸ್ಲಿಮ್ ಸಮುದಾಯಕ್ಕೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಜಂಇಯ್ಯತುಲ್ ಉಲೆಮಾದ ಪ್ರಾರಂಭದಲ್ಲಿ ಕಾರ್ಯದರ್ಶಿ ಯಾಗಿ ಮತ್ತು ಆತೂರು, ಅರಂತೋಡು ಪರಿಸರದ ಹಲವು ಧಾರ್ಮಿಕ, ಸಾಮಾಜಿಕ ಸಂಘಟನೆಗಳ ಸ್ಥಾಪಕರಾಗಿಯೂ ಸಮುದಾಯ ಸಂಘಟನೆಗಳಿಗೆ ಪ್ರೇರಣೆ ಆಗಿದ್ದರು ಎಂದು ಕೆಮ್ಮಾರ ಜಾಫರ್ ಫೈಝಿ ಸಂತಾಪದಲ್ಲಿ ತಿಳಿಸಿದ್ದಾರೆ.