ಡಾ.ಬಿ.ಎಂ.ಹೆಗ್ಡೆಗೆ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ಪ್ರಶಸ್ತಿ ಪ್ರದಾನ
ಮುಂಬೈ, ಜೂ.6: ನಾಡಿನ ಜನಪ್ರಿಯ ವೈದ್ಯರಲ್ಲ್ಗೊಬ್ಬರಾದ ಮಣಿಪಾಲ ಮಾಹೆ ವಿವಿಯ ಮಾಜಿ ಕುಲಪತಿ ಡಾ.ಬಿ.ಎಂ.ಹೆಗ್ಡೆ ಅವರಿಗೆ ಮುಂಬೈ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ನೀಡಲಾಗುವ ಜಾರ್ಜ್ ಫೆರ್ನಾಂಡೀಸ್ ಸ್ಮಾರಕ ಪ್ರಶಸ್ತಿಯನ್ನು ಮುಂಬೈಯ ಕುರ್ಲಾದಲ್ಲಿರುವ ಬಂಟರ ಭವನದಲ್ಲಿ ಸೋಮಾರ ಸಂಜೆ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ ಮಹಾರಾಷ್ಟ್ರದ ಸಚಿವ ದೀಪಕ್ ಕೇಸರ್ಕರ್, ಡಾ.ಬಿ.ಎಂ.ಹೆಗ್ದೆ ಅವರಿಗೆ ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡೀಸ್ ಸಂಸ್ಮರಣೆಯಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ಘೋಷಿಸಿದ 2019ನೇ ಸಾಲಿನ ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ವಿಧಾನ ಪರಿಷತ್ನ ವಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ನಮ್ಮ ಕರಾವಳಿಯ ಹೆಮ್ಮೆಯ ಪುತ್ರರಾದ ಜಾರ್ಜ್ ಫೆರ್ನಾಂಡೀಸ್ರ ಹೆಸರು ಅಮರವಾಗಿರಲು ನಮ್ಮ ಸರಕಾರ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು. ಜಾರ್ಜ್ ಫೆರ್ನಾಂಡೀಸ್ ಓರ್ವ ರಾಜಕಾರಿಣಿಗಿಂತಲೂ ಹೆಚ್ಚಿನವರು. ಅವರು ಬದುಕನ್ನು ಕಟ್ಟಿಕೊಂಡ ರೀತಿ,ತುರ್ತು ಪರಿಸ್ಥಿತಿಯಲ್ಲಿ ಸರಕಾರದ ವಿರುದ್ಧ ಹೋರಾಡಲು ಜನರನ್ನು ಸಂಘಟಿಸಿದ ಧೀಮಂತ ವ್ಯಕ್ತಿತ್ವದವರು ಎಂದರು.
ಅಧ್ಯಕ್ಷದೆ ವಹಿಸಿದ್ದ ಸಮಿತಿಯ ಸ್ಥಾಪಕಾಧ್ಯಕ್ಷ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ಜಾರ್ಜ್ ಸಮಿತಿಗೆ ನಿರಂತರವಾಗಿ ನೀಡುತಿದ್ದ ಪ್ರೋತ್ಸಾಹವನ್ನು ನೆನಪಿಸಿ ಕೊಂಡರು. ಇವರಿಂದಾಗಿ ಸಮಿತಿ ಕರಾಳಿಯಲ್ಲಿ ಹಮ್ಮಿಕೊಂಡ ಹಲವು ಹೋರಾಟಗಳಲ್ಲಿ ಯಸ್ಸು ಕಾಣಲು ಸಾಧ್ಯವಾಗಿದೆ ಎಂದರು.
ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದಡಾ.ಬಿ.ಎಂ.ಹೆಗ್ದೆ, ಜಾರ್ಜ್ ಫೆರ್ನಾಂಡೀಸ್ ಮುಂಬಯಿಗಾಗಮಿಸಿದ ಆರಂಭದ ದಿನಗಳನ್ನು ರಸ್ತೆ ಬದಿ ಯಲ್ಲಿ ಕಳೆದರೂ, ತನ್ನ ಕಷ್ಟ ಕಾರ್ಪಣ್ಯದ ಬಗ್ಗೆ ಹಿಂದೆ ನೋಡದೆ ಓರ್ವ ಸಂಪೂರ್ಣ ಭ್ರಷ್ಟಾಚಾರ ರಹಿತ ವ್ಯಕ್ತಿಯಾಗಿದ್ದರು. ರಾಜಕೀಯದಲ್ಲಿ ಅವರು ಕೆಸಲ್ಲಿ ಅರಳಿದ ಕಮಲದಂತೆ ಎಂದರು.
ಸಭೆಯನ್ನುದ್ದೇಶಿಸಿ ನ್ಯಾಯವಾದಿ ಪ್ರಕಾಶ್ ಎಲ್.ಶೆಟ್ಟಿ, ಬಂಟರ ಸಂಘದ ಎಸ್.ಎಂ.ಶೆಟ್ಟಿ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯಾಧ್ಯಕ್ಷ ಸಿಎ.ಶಂಕರ ಶೆಟ್ಟಿ ಮಾತನಾಡಿದರು.
ಸಮಿತಿ ಉಪಾಧ್ಯಕ್ಷ ಐ.ಆರ್.ಶೆಟ್ಟಿ ಸ್ವಾಗತಿಸಿದರು.ನಿತ್ಯಾನಂದ ಡಿ. ಕೋಟ್ಯಾನ್ ಸಮಿತಿಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು. ಡಾ. ಸುರೇಂದ್ರ ಕುಮಾರ್ ಹೆಗ್ದೆ ಸನ್ಮಾನಿತರನ್ನು ಪರಿಚಯಿಸಿದರು. ದೇವದಾಸ ಕುಲಾಲ್ ವಂದಿಸಿದರು.