ದೇರಳಕಟ್ಟೆ: ಎ.ಬಿ.ಶೆಟ್ಟಿ ಕಾಲೇಜಿನಲ್ಲಿ 'ಓರೋಫೇಶಿಯಲ್ ಪೈನ್ ಕ್ಲಿನಿಕ್' ಉದ್ಘಾಟನೆ
ಉಳ್ಳಾಲ: ನೂತನ ತಂತ್ರಜ್ಞಾನದೊಂದಿಗೆ ದಂತ ಚಿಕಿತ್ಸೆಯಲ್ಲಿ ಎ.ಬಿ.ಶೆಟ್ಟಿ ಕಾಲೇಜು ಸದಾ ಮುಂದಿದ್ದು, ನೂತನ ಕ್ಲಿನಿಕ್ ಗುಣಮಟ್ಟದ ಚಿಕಿತ್ಸೆಗೆ ಇನ್ನಷ್ಟು ಬಲ ತುಂಬಲಿದೆ. ದೇಶದಲ್ಲಿರುವ ದಂತ ಕಾಲೇಜುಗಳ ಪೈಕಿ ಎ.ಬಿ.ಶೆಟ್ಟಿ ಕಾಲೇಜು ಎರಡನೇ ಸ್ಥಾನ ಪಡೆದಿದ್ದು ಇಲ್ಲಿನ ವೈದ್ಯರು, ಸಿಬ್ಬಂದಿಯ ಕಠಿಣ ಪರಿಶ್ರಮ ಕಾರಣ, ಶೀಘ್ರವೇ ಮೊದಲ ಸ್ಥಾನ ತಲುಪಿಸುವಲ್ಲಿ ತಂಡ ಇನ್ನಷ್ಟು ಪರಿಶ್ರಮಪಡಬೇಕಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹಕುಲಾಧಿಪತಿ ವಿಶಾಲ್ ಹೆಗ್ಡೆ ಅಭಿಪ್ರಾಯಪಟ್ಟರು.
ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ ಅಧೀನದಲ್ಲಿ ದೇರಳಕಟ್ಟೆಯಲ್ಲಿರುವ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯದಲ್ಲಿ ನೂತನವಾಗಿ ಆರಂಭ ಗೊಂಡ 'ಓರೋಫೇಶಿಯಲ್ ಪೈನ್ ಕ್ಲಿನಿಕ್' ಮಂಗಳವಾರ ಉದ್ಘಾಟಿಸಿ, ವಿಂಶತಿ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯ ದಂತ ಕೌನ್ಸಿಲ್ ಅಧ್ಯಕ್ಷ ಡಾ. ರಾಜ್ ಕುಮಾರ್ ಅಲೆ, ನೂತನ ಕ್ಲಿನಿಕ್ ಅತ್ಯಾಧುನಿಕ ಹಾಗೂ ನೂತನ ತಂತ್ರಜ್ಞಾನಗಳನ್ನು ಹೊಂದಿದ್ದು, ಮುಖಾಂಗಕ್ಕೆ ಸಂಬಂಧಪಟ್ಟ ಕ್ಲಿಷ್ಟಕರ ಸಮಸ್ಯೆಗಳ ಪರಿಹಾರ ಸುಲಭವಾಗಲಿದೆ ಎಂದು ಹೇಳಿದರು.
ಮಂಗಳೂರು ಎಂಸಿಓಡಿಎಸ್ ಓರಲ್ ಮೆಡಿಸಿನ್ ಮತ್ತು ರೇಡಿಯೋಲಜಿ ವಿಭಾಗ ಮುಖ್ಯಸ್ಥ ಡಾ.ರವಿಕಿರಣ್ ಓಂಗೋಲೆ ಸಂಪನ್ಮೂಲ ವ್ಯಕ್ತಿಯಾಗಿದ್ದರು. ಎ.ಬಿ.ಶೆಟ್ಟಿ ದಂತ ಕಾಲೇಜಿನ ಸ್ಥಾಪಕ ಡೀನ್ ಡಾ.ಎನ್.ಶ್ರೀಧರ್ ಶೆಟ್ಟಿ, ಕಾರ್ಯಕ್ರಮ ಸಹಸಂಯೋಜಕಿ ಡಾ.ಶೃತಿ ಹೆಗ್ಡೆ ಉಪಸ್ಥಿತರಿದ್ದರು.
ಕಾಲೇಜಿನ ಡೀನ್ ಡಾ.ಯು.ಎಸ್.ಕೃಷ್ಣ ನಾಯಕ್ ಸ್ವಾಗತಿಸಿದರು. ಡಾ.ವಿದ್ಯಾ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ಓರಲ್ ಮೆಡಿಸಿನ್ ಮತ್ತು ರೇಡಿಯೋಲಜಿ ವಿಭಾಗ ಮುಖ್ಯಸ್ಥ ಡಾ.ಸುಭಾಷ್ ಬಾಬು ವಂದಿಸಿದರು. ಡಾ.ಸುಪ್ರಿಯಾ ಭಟ್ ಕಾರ್ಯಕ್ರಮ ನಿರೂಪಿಸಿದರು.