ಮಣಿಪಾಲ ಕೆಎಂಸಿಯಲ್ಲಿ ರಕ್ತದಾನಿಗಳ ಹೆಲ್ತ್ ಕ್ಲಿನಿಕ್
ಮಣಿಪಾಲ, ಜೂ.11: ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದಿಂದ ವಿಶ್ವ ರಕ್ತದಾನಿಗಳ ದಿನವನ್ನು ಕಳೆದ ಶನಿವಾರ ಆಚರಿಸಲಾಯಿತು. ಈ ಸಂದರ್ಭದಲ್ಲಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತಲ್ಲದೇ, ರಕ್ತದಾನಿಗಳ ಹೆಲ್ತ್ ಕ್ಲಿನಿಕ್ನ್ನು ಪ್ರಾರಂಭಿಸಲಾಯಿತು.
ಜಿಲ್ಲೆಯಾದ್ಯಂತ ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಜಿಲ್ಲೆಯಲ್ಲಿ ರಕ್ತದಾನದ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಿದ, ರಕ್ತದಾನಕ್ಕೆ ಯುವಕರನ್ನು ಪ್ರೋತ್ಸಾಹಿಸಿದ ನಾಡೋಜ ಡಾ.ಜಿ.ಶಂಕರ್ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ರಕ್ತದಾನಿಗಳ ಹೆಲ್ತ್ ಕ್ಲಿನಿಕ್ನ್ನು ಉದ್ಘಾಟಿಸಿದ ಕೆಎಂಸಿ ಣಣಿಪಾಲದ ಸಹಾಯಕ ಡೀನ್ ಡಾ.ಶರತ್ ರಾವ್ ಮಾತನಾಡಿ, ನಿರಂತರವಾಗಿ ಸ್ವಯಂಪ್ರೇರಣೆಯಿಂದ ರಕ್ತದಾನ ಮಾಡುವ ರಕ್ತದಾನಿಗಳು ಸುರಕ್ಷಿತ ರಕ್ತದ ಮೂಲವಾಗಿದ್ದಾರೆ. ರಕ್ತದಾನ ಸಮಾಜಕ್ಕೆ ಮಾಡುವ ಅತೀ ದೊಡ್ಡ ಸೇವೆಯಾ ಗಿದ್ದು, ನೀವು ಒಂದು ಬಾರಿ ನೀಡುವ ರಕ್ತ ಮೂವರ ಪ್ರಾಣವನ್ನು ಉಳಿಸಲು ನೆರವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿ ರಕ್ತನಿಧಿ ವಿಭಾಗದ ಮುಖ್ಯಸ್ಥೆ ಹಾಗೂ ಪ್ರೊ. ಡಾ.ಶಮೀ ಶಾಸ್ತ್ರಿ ರಕ್ತದಾನಿಗಳ ಕ್ಲಿನಿಕ್ ಬಗ್ಗೆ ಮಾತನಾಡಿ, ಸ್ವಯಂಪ್ರೇರಿತವಾಗಿ ರಕ್ತದಾನ ಮಾಡುವವರನ್ನು ಉಳಿಸಿಕೊಳ್ಳುವುದು ಅತಿ ಮುಖ್ಯ. ಇದಕ್ಕಾಗಿ ಈ ಕ್ಲಿನಿಕ್ನ್ನು ಪ್ರಾರಂಭಿಸಲಾಗಿದೆ ಎಂದರು.
ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ಪೂರ್ಣಿಮಾ ಬಾಳಿಗಾ ಅವರು ಮೊಗವೀರ ಯುವ ಸಂಘಟನೆಯನ್ನು ಸನ್ಮಾನಿಸಿದರು. ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ ಉಪಸ್ಥಿತರಿದ್ದರು.