ವಿದ್ಯುತ್ ದರ ಏರಿಕೆ ವಿರೋಧಿಸಿ ಸಿಪಿಎಂ ಧರಣಿ
ಉಡುಪಿ, ಜೂ.12: ವಿದ್ಯುತ್ ದರ ಏರಿಕೆ ಮತ್ತು ಅಸಮರ್ಪಕ ಬಿಲ್ಲಿಂಗ್ ವಿರೋಧಿಸಿ ಸಿಪಿಐಎಂ ಉಡುಪಿ ತಾಲೂಕು ಸಮಿತಿ ಬುಧವಾರ ಉಡುಪಿ ಮೆಸ್ಕಾಂ ಕಚೇರಿ ಎದುರು ಧರಣಿ ನಡೆಸಿತು.
ಧರಣಿಯನ್ನುದ್ದೇಶಿಸಿ ಮಾತನಾಡಿದ ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಬಾಲ ಕೃಷ್ಣ ಶೆಟ್ಟಿ, ಬರಗಾಲದ ಪರಿಣಾಮ ಇಂದು ನೀರನ್ನು ಕೂಡ ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಅದೇ ರೀತಿ ಮರಳು ಸಮಸ್ಯೆಯಿಂದ ಎಲ್ಲರ ಆದಾಯ ಕುಸಿದಿದೆ. ಈ ಮಧ್ಯೆ ವಿದ್ಯುತ್ ದರ ಏರಿಕೆ ಮಾಡಿರುವುದು ಜನರಿಗೆ ಬಹಳ ದೊಡ್ಡ ಹೊರೆಯಾಗಿದೆ ಎಂದು ದೂರಿದರು.
ವಿದ್ಯುತ್ ಪ್ರಸರಣದಲ್ಲಿ ಆಗುತ್ತಿರುವ ನಷ್ಟವನ್ನು ಕಡಿಮೆ ಮಾಡಿದರೆ ವಿದ್ಯುತ್ ದರ ಏರಿಕೆ ಮಾಡುವ ಅಗತ್ಯವೇ ಬರುವುದಿಲ್ಲ. ಸರಕಾರ ಈ ಜನ ವಿರೋಧಿ ನೀತಿಯನ್ನು ಕೈಬಿಡದಿದ್ದರೆ ಹೋರಾಟವನ್ನು ಮುಂದುವರೆಸಲಾಗುವುದು ಎಂದು ಅವರು ಎ್ಚರಿಕೆ ನೀಡಿದರು.
ಬಳಿಕ ಈ ಕುರಿತ ಮನವಿಯನ್ನು ಮೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಿಪಿಎಂ ತಾಲೂಕು ಕಾರ್ಯದರ್ಶಿ ಶಶಿಧರ ಗೊಲ್ಲ, ಸಿಐಟಿಯು ಜಿಲ್ಲಾಧ್ಯಕ್ಷ ವಿಶ್ವನಾಥ ರೈ, ಮುಖಂಡರಾದ ಕವಿರಾಜ್, ನಳಿನಿ, ಪುಷ್ಪಾ, ವಿದ್ಯಾರಾಜ್ ಮೊದಲಾದ ವರು ಉಪಸ್ಥಿತರಿದ್ದರು.