ಗ್ರಾಮಚಾವಡಿ: ತಾಜುಲ್ ಉಲಮಾ ಶರೀಅತ್ ಮಹಿಳಾ ಕಾಲೇಜು ಉದ್ಘಾಟನೆ
ಕೊಣಾಜೆ: ಓರ್ವ ಮಗು ಹುಟ್ಟಿದ ಬಳಿಕ ಮರಣದವರೆಗೂ ಶಿಕ್ಷಣ ಕಲಿತಷ್ಟು ಮುಗಿಯದು. ಅಂತಹ ಪ್ರತಿಯೊಂದು ವಿಧಾನ ಇಸ್ಲಾಮ್ ಕಲಿಸಿದೆ. ಶಿಕ್ಷಣ ಎಂದರೆ ಕೇವಲ ಲೌಕಿಕ ಮಾತ್ರ ಎನ್ನುವ ಭಾವನೆ ತೊರೆದು ಧಾರ್ಮಿಕ ಶಿಕ್ಷಣಕ್ಕೂ ಆದ್ಯತೆ ನೀಡಬೇಕಾಗಿದೆ ಎಂದು ಮುಡಿಪು ತಾಜುಲ್ ಉಲಮಾ ಶರೀಅತ್ ಕಾಲೇಜಿನ ಪ್ರಾಧ್ಯಾಪಕ ಲತೀಫ್ ಸಖಾಫಿ ಅಭಿಪ್ರಾಯಪಟ್ಟರು.
ತಾಜುಲ್ ಉಲಮಾ ಶರೀಅತ್ ಮಹಿಳಾ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜೀವನದಲ್ಲಿ ಯಶಸ್ವಿಯಾಗಿ ಮುನ್ನಡೆಯಬೇಕಾದರೆ ಲೌಕಿಕ ಶಿಕ್ಷಣದೊಂದಿಗೆ ಧಾರ್ಮಿಕ ಶಿಕ್ಷಣವೂ ಅಗತ್ಯ, ಎಳವೆಯಲ್ಲೇ ಇವೆರೆಡೂ ಶಿಕ್ಷಣ ದೊರಕಿದಾಗ ಉತ್ತಮ ಪ್ರಜೆಯಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ಕಾಲೇಜಿನ ಪ್ರಾಧ್ಯಾಪಕ ಅಬ್ದುಲ್ ರಹ್ಮಾನ್ ಮದನಿ ತೋಟಾಲ್ ಮಾತನಾಡಿ, ಶಿಕ್ಷಣ ಎನ್ನುವುದು ಪ್ರತಿಯೊಬ್ಬರಿಗೂ ಅತ್ಯವಶ್ಯಕ. ಹಿಂದೆಲ್ಲಾ ಮುಸ್ಲಿಂ ಹೆಣ್ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಅವಕಾಶ ಇರಲಿಲ್ಲ. ಆದರೆ ಪ್ರಸ್ತುತ ದಿನಗಳಲ್ಲಿ ಹೆಣ್ಮಕ್ಕಳಿಗೂ ಶಿಕ್ಷಣ ಅಗತ್ಯವಾಗಿರುವುದರಿಂದ ತಾಜುಲ್ ಉಲಮಾ ಸಂಸ್ಥೆ ಅವಕಾಶ ಕಲ್ಪಿಸಿದೆ ಎಂದು ಹೇಳಿದರು.
ಹರೇಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನಿತಾ ಡಿಸೋಜ ಉದ್ಘಾಟಿಸಿದರು. ತಾಜುಲ್ ಉಲಮಾ ಶರೀಅತ್ ಕಾಲೇಜಿನ ಪ್ರಾಂಶುಪಾಲ ಅಬ್ದುಲ್ ರಹ್ಮಾನ್ ಮದನಿ ಅಧ್ಯಕ್ಷತೆ ವಹಿಸಿದ್ದರು. ಅಹ್ಮದ್ ಕುಂಞÂ ಕಲ್ಮಿಂಜ ಮುಖ್ಯ ಅತಿಥಿಯಾಗಿದ್ದರು.
ಶಿಕ್ಷಕಿ ಅಝ್ಮೀನಾ ಸ್ವಾಗತಿಸಿದರು. ಉಸ್ತುವಾರಿ ಕೆ.ಎಂ.ಮುಹಮ್ಮದ್ ಮದನಿ ಉಸ್ತಾದ್ ಸಾಮಣಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
`ಧಾರ್ಮಿಕ ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯಗತ್ಯ, ಕ್ರೈಸ್ತ ಸಮುದಾಯದಲ್ಲೂ ವಾರಕ್ಕೊಮ್ಮೆ ಚರ್ಚ್ ಗಳಲ್ಲಿ ಬೈಬಲ್ ಕಲಿಸುವ ವ್ಯವಸ್ಥೆ ಇದೆ. ಮುಸ್ಲಿಮರೂ ಹೆಚ್ಚಿನ ರೀತಿಯಲ್ಲಿ ಉತ್ತಮವಾಗಿ ಕುರಾನ್ ಕಲಿಕೆಗೆ ಅವಕಾಶ ಸಿಕ್ಕಿದ್ದು ಪ್ರಯೋಜನ ಪಡೆಯಬೇಕು'
- ಅನಿತಾ ಡಿಸೋಜ, ಅಧ್ಯಕ್ಷೆ, ಹರೇಕಳ ಗ್ರಾಮ ಪಂಚಾಯತ್