ಹಿರಿಯ ನ್ಯಾಯವಾದಿ ಸೀತಾರಾಮ್ ಶೆಟ್ಟಿ ನಿಧನಕ್ಕೆ ಗಣ್ಯರ ಸಂತಾಪ
ಮಂಗಳೂರು, ಜೂ.14: ಮಂಗಳೂರಿನ ಹಿರಿಯ ನ್ಯಾಯವಾದಿ ಸೀತಾರಾಮ್ ಶೆಟ್ಟಿಯವರ ನಿಧನಕ್ಕೆ ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿಯ ನಿವೃತ್ತ ನ್ಯಾಯಾಂಗ ಸದಸ್ಯ ಮೂಸಾಕುಂಞಿ ನಾಯರ್ಮೂಲೆ ತೀವ್ರ ಸಂತಾಪ ವ್ಯಕ್ಯಪಡಿಸಿದ್ದಾರೆ.
ದಿವಂಗತ ಸೀತಾರಾಮ್ ಶೆಟ್ಟಿ ಓರ್ವ ಪ್ರಸಿದ್ಧ ವಕೀಲರು ಮಾತ್ರವಲ್ಲ, ನಾನು ಕಂಡಂತೆ ಅವರೋರ್ವ ಸ್ನೇಹಜೀವಿ ಹಾಗೂ ಅತ್ಯಂತ ಜಾತ್ಯತೀತ ಮನೋಭಾವವನ್ನು ಮೈಗೂಡಿಸಿಕೊಂಡು ಎಲ್ಲರೊಂದಿಗೆ ಬೆರೆತು ಜೀವಿಸಿದ ಅಜಾತಶತ್ರು. ಸೀತಾರಾಮ್ರ ಅಗಲುವಿಕೆಯಿಂದ ರಾಜ್ಯದ ನ್ಯಾಯ ನಿರ್ವಹಣೆ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಶಾಸಕ ವೇದವ್ಯಾಸ ಕಾಮತ್ ಶೋಕ
ಹಿರಿಯ ವಕೀಲರಾದ ಸೀತಾರಾಮ್ ಶೆಟ್ಟಿ ನಿಧನಕ್ಕೆ ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಹೈಕೋರ್ಟ್ ವಕೀಲರಾಗಿದ್ದು, ನ್ಯಾಯ, ಸತ್ಯದ ಪಾಲನೆ ಮತ್ತು ಬಡವರ ಬಗ್ಗೆ ಸಹಾನೂಭೂತಿವುಳ್ಳವರಾಗಿದ್ದ ಸೀತಾರಾಮ್ ಶೆಟ್ಟಿ ಯುವ ವಕೀಲರಿಗೆ ಮಾದರಿಯಾಗಿದ್ದಾರೆ. ಅವರ ಅಗಲುವಿಕೆಯೊಂದಿಗೆ ವಕೀಲ ವೃತ್ತಿಯ ಮಹಾನ್ ಕೊಂಡಿಯೊಂದು ಕಳಚಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ. ಮಂಗಳೂರಿನ ಹಿರಿಯ ವಕೀಲರಾದ ವೈಟಿ ಹೆಗ್ಡೆ, ಪುರುಷೋತ್ತಮ ಪೂಜಾರಿ ಹಾಗೂ ಸೀತಾರಾಮ್ ಶೆಟ್ಟಿ ವಕೀಲ ಲೋಕದ ತ್ರಿಮೂರ್ತಿಗಳಂತಿದ್ದರು ಎಂದು ಬಣ್ಣಿಸಿದ ಶಾಸಕ ಕಾಮತ್, ಸೀತಾರಾಂ ಶೆಟ್ಟಿಯವರ ಕುಟುಂಬಕ್ಕೆ ಭಗವಂತ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.