ಗನ್ಲೈಸೆನ್ಸ್ ವರ್ಗಾಯಿಸಲು ಲಂಚ ಸ್ವೀಕಾರ ಪ್ರಕರಣ: ನಿವೃತ್ತ ತಹಶೀಲ್ದಾರ್ಗೆ ಜೈಲುಶಿಕ್ಷೆ; ದಂಡ
ಮಂಗಳೂರು, ಜೂ.15: ಬಂಟ್ವಾಳ ತಾಲೂಕು ನಿವೃತ್ತ ತಹಶೀಲ್ದಾರ್ ಆಗಿರುವ ಟಿ.ಎನ್. ನಾರಾಯಣ ರಾವ್ ಗನ್ಲೈಸೆನ್ಸ್ ವರ್ಗಾಯಿಸಲು ಲಂಚ ಪಡೆದುಕೊಂಡ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿಗೆ ಒಂದು ವರ್ಷ ಸಾದಾ ಸಜೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
ಪ್ರಕರಣ ವಿವರ: 2012ರ ಫೆ.10ರಂದು ಬಂಟ್ವಾಳದ ಸತೀಶ್ ಪ್ರಭು ಎಂಬವರು ತಂದೆಯ ಹೆಸರಿನಲ್ಲಿದ್ದ ಗನ್ ಲೈಸೆನ್ಸ್ ವರ್ಗಾವಣೆಗೆ ಅರ್ಜಿ ಹಾಕಿದ್ದರು. ಈ ಸಂದರ್ಭ ತಹಶೀಲ್ದಾರ್ ಮೂರು ಸಾವಿರ ರೂ. ಲಂಚದ ಬೇಡಿಕೆಯಿಟ್ಟು ಎರಡು ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದರು. ಈ ವೇಳೆ ಮಂಗಳೂರು ಲೋಕಾಯುಕ್ತ ನಿರೀಕ್ಷಕ ದಿಲೀಪ್ ಕುಮಾರ್ ಮತ್ತು ಸಿಬ್ಬಂದಿ ದಾಳಿ ಮಾಡಿ ಆರೋಪಿಯನ್ನು ಬಂಧಿಸಿ, ಆರೋಪಿಯ ವಶದಲ್ಲಿದ್ದ 85 ಸಾವಿರ ರೂ. ನಗದನ್ನು ವಶಪಡಿಸಿಕೊಂಡಿದ್ದರು.
ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಹಾಗೂ ಲೋಕಾಯುಕ್ತ ವಿಶೇಷ ನ್ಯಾಯಾಲಯ ನ್ಯಾಯಾಧೀಶ ಬಿ. ಮುರಳೀಧರ ಪೈ ಅವರು ಪ್ರಕರಣ ವಿಚಾರಣೆ ನಡೆಸಿ, ಭ್ರಷ್ಟಾಚಾರ ನಿಗ್ರಹ ಕಾಯ್ದೆಯ ಕಲಂ 7 ಹಾಗೂ ಕಲಂ 13 (1) (ಡಿ) ಯಲ್ಲಿ ಎಸಗಿದ ಅಪರಾಧಕ್ಕೆ ಒಂದು ವರ್ಷ ಸಾದಾ ಸಜೆ, 20 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ ಮೂರು ತಿಂಗಳ ಸಾದಾ ಸಜೆ ಅನುಭವಿಸಬೇಕೆಂದು ಶಿಕ್ಷೆ ಪ್ರಕಟಿಸಿದ್ದಾರೆ.
ವಿಶೇಷ ಸರಕಾರಿ ಅಭಿಯೋಜಕ ಕೆ.ಎಸ್.ಎನ್. ರಾಜೇಶ್ ವಾದ ಮಂಡಿಸಿದರು. ಆರೋಪಿಯಿಂದ ವಶಪಡಿಸಿಕೊಂಡ 85 ಸಾವಿರ ರೂ. ಹಣಕ್ಕೆ ಆರೋಪಿ ಸೂಕ್ತ ದಾಖಲೆ ನೀಡಲು ವಿಫಲನಾದ ಕಾರಣಕ್ಕೆ ಹಣವನ್ನು ಸರಕಾರಕ್ಕೆ ಮುಟ್ಟುಗೋಲು ಹಾಕುವಂತೆ ನ್ಯಾಯಾಲಯ ಆದೇಶಿಸಿದೆ.
ಆರೋಪಿ ಈಗ ಕೆಲಸದಿಂದ ನಿವೃತ್ತಿಯಾಗಿದ್ದು, ಬೆಂಗಳೂರಿನ ಯಲಹಂಕದಲ್ಲಿ ವಾಸಿಸುತ್ತಿದ್ದಾರೆ. ಆಗಿನ ಲೋಕಾಯುಕ್ತ ಇನ್ಸ್ಪೆಕ್ಟರ್ ದಿಲೀಪ್ ಕುಮಾರ್ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.