ಹೆಲ್ತಿ ಕ್ಯಾಂಪಸ್: ‘ಜಲ ಸಂರಕ್ಷಣೆ ನಮ್ಮ ಹೊಣೆ’ ಅಭಿಯಾನಕ್ಕೆ ಚಾಲನೆ
ಮಂಗಳೂರು, ಜೂ.15: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಸಮಿತಿಯಿಂದ ಹೆಲ್ತಿ ಕ್ಯಾಂಪಸ್ ‘ಜಲ ಸಂರಕ್ಷಣೆಯೇ ನಮ್ಮ ಹೊಣೆ’ ಅಭಿಯಾನಕ್ಕೆ ಬಂದರ್ನಲ್ಲಿನ ಸರಕಾರಿ ಉರ್ದು ಪ್ರೌಢ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕ್ಯಾಂಪಸ್ ಫ್ರಂಟ್ ಜಿಲ್ಲಾಧ್ಯಕ್ಷ ಸಾದಿಕ್ ಪುತ್ತೂರು, ಜಾಗತಿಕವಾಗಿ ಏರುತ್ತಿರುವ ತಾಪಮಾನ, ಇಳಿಮುಖವಾಗುತ್ತಿರುವ ಮಳೆ, ಪರಿಸರ ಮಾಲಿನ್ಯ, ಕೈಗಾರೀಕರಣ, ನಗರೀಕರಣ ಅರಣ್ಯ ನಾಶ ಮುಂತಾದವುಗಳಿಂದ ಪರಿಸರ ದಿನೇದಿನೇ ನಾಶವಾಗುತ್ತಿದೆ. ಮಳೆಗಾಲದಲ್ಲಿ ಹರಿದು ಪೋಲಾಗುವ ಶುದ್ಧ ನೀರನ್ನು ಮಳೆ ನೀರಿನ ಕೊಯ್ಲು ಹಾಗೂ ಇನ್ನಿತರ ಮಾರ್ಗೋಪಾಯಗಳನ್ನು ಅನುಸರಿಸುವ ಮೂಲಕ ಮಳೆ ನೀರನ್ನು ಸಂರಕ್ಷಿಸಬೇಕಾಗಿದೆ ಎಂದು ಹೇಳಿದರು.
ಮಾಲಿನ್ಯ ಪ್ರಭಾವಗಳನ್ನು ರಕ್ಷಿಸಲು ಜಗತ್ತಿನಾದ್ಯಂತ ನಿಯಂತ್ರಣಾ ಕಾಯ್ದೆಗಳನ್ನು ರೂಪಿಸಬೇಕು. ನೈಸರ್ಗಿಕ ವಸ್ತುಗಳ ಬಳಕೆ ಹೆಚ್ಚಾಗಬೇಕು. ಈ ಅಭಿಯಾನದ ಮೂಲಕ ಮಳೆನೀರಿನ ಸಂರಕ್ಷಣೆಯ ಕುರಿತು ಜಿಲ್ಲಾ ಮಟ್ಟದಲ್ಲಿ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ನ್ಯಾಶನಲ್ ವುಮೆನ್ಸ್ ಫ್ರಂಟ್ ರಾಷ್ಟ್ರೀಯ ಸಮಿತಿ ಸದಸ್ಯೆ ನೌಶೀರಾ, ವಿದ್ಯಾರ್ಥಿಗಳಿಗೆ ಶಿಕ್ಷಣದ ಮಹತ್ವ ಹಾಗೂ ನೈತಿಕ ಮೌಲ್ಯಗಳ ಕುರಿತು ಉಪನ್ಯಾಸ ನೀಡಿದರು. ಶಾಲಾ ಮೂಖ್ಯೋಪಾಧ್ಯಾಯ ಮುಧ್ನಾಳ್, ಪರಿಸರ ಸಂರಕ್ಷಣೆಯ ಕುರಿತು ಮಕ್ಕಳಲ್ಲಿ ಜಾಗೃತಿ ಮೂಡಿಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಎಸ್ಡಿಎಂಸಿ ಅಧ್ಯಕ್ಷ ಮುಹಮ್ಮದ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. ಅಭಿಯಾನದ ಅಂಗವಾಗಿ ಸಸಿ ನೆಡುವಿಕೆ ಕಾರ್ಯಕ್ರಮ ನಡೆಯಿತು. ಬಾಸಿತ್ ಕಾರ್ಯಕ್ರಮ ನಿರೂಪಿಸಿದರು. ಮುಹಮ್ಮದ್ ಸಿರಾಜ್ ಸ್ವಾಗತಿಸಿ, ವಂದಿಸಿದರು.