ಪಾನೀರ್ ಇಗರ್ಜಿಯಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ
ಉಳ್ಳಾಲ, ಜೂ.16: ಕೆಥೊಲಿಕ್ ಸಭಾ ಪಾನೀರ್ ಘಟಕದ ವತಿಯಿಂದ ಪಾನೀರ್ ಮೆರ್ಸಿಯಮ್ಮನವರ ಇಗರ್ಜಿಯಲ್ಲಿ ರವಿವಾರ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ಮಾತನಾಡಿದ ಮಂಗಳೂರು ಬಿಷಪ್ ಹೌಸ್ನ ಅತಿಥಿ ಧರ್ಮಗುರು ಫಾ.ಮ್ಯಾಕ್ಸ್ಮಿಂ ರೊಜಾರಿಯೋ ವಿನಾಯಿತಿ ಪತ್ರ ಕೇಳುವುದು ಭಿಕ್ಷೆ ಬೇಡುವುದಕ್ಕೆ ಸಮ. ಸರಕಾರಕ್ಕೆ ನಾವು ಕಟ್ಟುವ ತೆರಿಗೆಗೆ ಪ್ರತಿಯಾಗಿ ನಮ್ಮ ಹಕ್ಕು ಕೇಳಿ ಪಡೆಯುವ ಮೂಲಕ ಸರಕಾರದ ಸವಲತ್ತು ಪೂರ್ಣ ಪ್ರಮಾಣದಲ್ಲಿ ಪಡೆಯುವ ಪ್ರಯತ್ನ ಅಗತ್ಯ ಎಂದು ಹೇಳಿದರು.
ಇಂದು ಅಲ್ಪಸಂಖ್ಯಾತ ಸಮುದಾಯದ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳಿವೆ. ಆದರೆ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿರುವ ಕ್ರೈಸ್ತರು ಈ ವಿಷಯದಲ್ಲಿ ನಿರ್ಲಕ್ಷ್ಯ ಭಾವನೆ ಹೊಂದಿರುವುದರಿಂದ ಕಳೆದ ವರ್ಷ ಶೇ. 8.7 ವಿದ್ಯಾರ್ಥಿವೇತನ ಮಾತ್ರ ಸಿಕ್ಕಿದೆ. ಈ ಬಗ್ಗೆ ಕೆಥೊಲಿಕ್ ಸಭಾ ಜಾಗೃತಿ ಮೂಡಿಸುತ್ತಿದ್ದು, ಇದರ ಪ್ರಯೋಜನ ಮುಂದಿನ ದಿನಗಳಲ್ಲೂ ಸಮುದಾಯಕ್ಕೆ ಸಿಗುವಂತಾಗಬೇಕು ಎಂದು ಫಾ.ಮ್ಯಾಕ್ಸ್ಮಿಂ ರೊಜಾರಿಯೋ ನುಡಿದರು.
ಕಾರ್ಯಕ್ರಮದಲ್ಲಿ ಎಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತ್ಯಧಿಕ ಅಂಕ ಪಡೆದ 19 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪಾನೀರ್ ಮೆರ್ಸಿಯಮ್ಮನವರ ಇಗರ್ಜಿಯ ಧರ್ಮಗುರು ಫಾ.ಡೆನ್ನಿಸ್ ಸುವಾರಿಸ್, ಬರೇಲಿ ಡಯಾಸಿಸ್ ಧರ್ಮಗುರು ಫಾ.ನವೀನ್ ಡಿಸೋಜ, ಕೆಥೊಲಿಕ್ ಸಭಾ ಪಾನೀರ್ ಘಟಕಾಧ್ಯಕ್ಷ ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ಕಾರ್ಯದರ್ಶಿ ರುವಿತಾ ಮೆನೇಜಸ್ ಉಪಸ್ಥಿತರಿದ್ದರು.