ಬಂಟ್ವಾಳ: ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ
ಬಂಟ್ವಾಳ, ಜೂ. ೧೬: ಕಾಲೇಜು ವಿದ್ಯಾರ್ಥಿಯೋರ್ವ ತನ್ನ ಮನೆಯ ಹಿಂಬದಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಳ್ನಾಡು ಗ್ರಾಮದ ಕಾಡುಮಠ ಸಮೀಪದ ಕುಚ್ಚಿನಡ್ಕ ಎಂಬಲ್ಲಿ ರವಿವಾರ ನಡೆದಿದೆ.
ಕುಚ್ಚಿನಡ್ಕ ನಿವಾಸಿ, ಆಟೋ ಚಾಲಕ ಡೆನ್ನಿಸ್ ಡಿಸೋಜಾ ಎಂಬವರ ಪುತ್ರ ಕ್ರಿಷ್ಟಲ್ ನಿಖಿಲ್ ಡಿಸೋಜಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಮನೆಮಂದಿ ರವಿವಾರ ಬೆಳಗ್ಗೆ ಸಾಲೆತ್ತೂರು ಚರ್ಚಿಗೆ ಪ್ರಾರ್ಥನೆಗೆ ಹೋಗಿದ್ದ ಸಂದರ್ಭ ಕ್ರಿಷ್ಟಲ್ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದ್ದು, ಮನೆಯವರು ಪ್ರಾರ್ಥನೆ ಮುಗಿಸಿ ಬಂದಾಗ ಮನೆ ಹಿಂಬದಿಯ ಕಿಟಕಿಯಲ್ಲಿ ಕ್ರಿಷ್ಟಲ್ ನೇತಾಡುತ್ತಿರುವುದು ಕಂಡುಬಂದಿದೆ ಎಂದು ಪೋಷಕರು ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.
ಕ್ರಿಷ್ಟಲ್ ವಿಟ್ಲ ಟುಟೋರಿಯಲ್ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಕಲಾ ವಿಭಾಗದಲ್ಲಿ ಕಲಿಯುತ್ತಿದ್ದು, ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಮೃತರು ತಂದೆ, ತಾಯಿ ಮತ್ತು ಇಬ್ಬರು ತಂಗಿಯರನ್ನು ಅಗಲಿದ್ದಾರೆ.
ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.