ಭಟ್ಕಳ: ವೈದ್ಯರ ಮುಷ್ಕರ; ತೊಂದರೆಗೀಡಾದ ಹೊರ ರೋಗಿಗಳು
ಭಟ್ಕಳ: ಪಶ್ಚಿಮ ಬಂಗಾಳದ ವೈದ್ಯರ ಮೇಲೆ ಉಂಟಾಗಿರುವ ಹಲ್ಲೆಯನ್ನು ಖಂಡಿಸಿ ಆಖಿಲಾ ಭಾರತೀಯ ವೈದ್ಯರ ಸಂಘ ನೀಡಿದ ಬಂದ್ ಕರೆಯಿಂದಾಗಿ ಭಟ್ಕಳದ ಎಲ್ಲ ಖಾಸಗಿ ಆಸ್ಪತ್ರೆಗಳ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಹೊರರೋಗಿಗಳು ಪರದಾಡುವಂತಾಯಿತು.
ವೈದ್ಯರ ಮುಷ್ಕರದ ಬಗ್ಗೆ ತಿಳಿಯದ ರೋಗಿಗಳು ಆಟೋ ರಿಕ್ಷಾದಲ್ಲಿ ಒಂದು ಆಸ್ಪತ್ರೆಯಿಂದ ಮತ್ತೊಂದು ಆಸ್ಪತ್ರೆಗೆ ಓಡಾಡುತ್ತ ಹಲವು ತೊಂದರೆಗಳನ್ನು ಅನುಭವಿಸುವಂತಾಯಿತು.
ಸೋಮವಾರ ಬೆಳಿಗ್ಗೆಯಿಂದಲೆ ಖಾಸಗಿ ಆಸ್ಪತ್ರೆಯ ಮುಂಭಾಗದಲ್ಲಿ ಇಂದು ವೈದ್ಯರ ಮುಷ್ಕರದ ಕಾರಣ ಆಸ್ಪತ್ರೆ ಕಾರ್ಯವಹಿಸುವುದನ್ನು ಸ್ಥಗಿತಗೊಳಿಸಲಾಗಿದೆ ಎಂಬ ಸೂಚನಾಫಲಕ ನೇತಾಡುತ್ತಿತ್ತು. ತುರ್ತುಸೇವಾ ಹೊರತು ಪಡಿಸಿ ಒಪಿಡಿ ವಿಭಾಗ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಈ ಮಧ್ಯೆ ಭಾರತೀಯ ವೈದ್ಯಕೀಯ ಸಂಘ ಭಟ್ಕಳ ಶಾಖೆಯು ಇಲ್ಲಿನ ಸಹಾಯಕ ಆಯುಕ್ತರ ಮೂಲಕ ಮನವಿಯೊಂದನ್ನು ಅರ್ಪಿಸಿ ಪಶ್ಚಿಮ ಬಂಗಾಳದಲ್ಲಿ ವೈದ್ಯರ ಮೇಲಿನ ಹಲ್ಲೆಯನ್ನು ಬಲವಾಗಿ ಖಂಡಿಸಿದರು.
ಈ ಸಂದರ್ಭದಲ್ಲಿ ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳಾದ ಡಾ.ಆರ್.ವಿ.ಸರಾಫ್, ಡಾ.ಯಾಸೀನ್ ಮೊಹತೆಶಮ್, ಡಾ.ವೀಣಾ, ಡಾ.ಗಣೇಶ ಪ್ರಭು, ಡಾ.ಅಬ್ದುಲ್ ಕಾದರ್ ಮತ್ತಿತರರು ಉಪಸ್ಥಿತರಿದ್ದರು.