ಕನ್ಯಾನದಲ್ಲಿ ಯುವಕನಿಗೆ ಹಲ್ಲೆ ಪ್ರಕರಣ: ತನಿಖೆಗಾಗಿ ವಿಶೇಷ ತಂಡ ರಚನೆ- ಸಚಿವ ಖಾದರ್
ಬಂಟ್ವಾಳ: ಕನ್ಯಾನದಲ್ಲಿ ಮಾರಕಾಸ್ತ್ರದಿಂದ ಹಲ್ಲೆಗೊಳಗಾದ ಕನ್ಯಾನ ಗ್ರಾಮದ ಪೊಯ್ಯಗದ್ದೆ ನಿವಾಸಿ, ವಿದ್ಯಾರ್ಥಿ ಅಬ್ದುಲ್ ಮುಸ್ತಾಕ್ ರನ್ನು ಸಚಿವ ಯು.ಟಿ. ಖಾದರ್ ಅವರು ಸೋಮವಾರ ಆಸ್ಪತ್ರೆಯಲ್ಲಿ ಭೇಟಿ ಮಾಡಿ ಸಾಂತ್ವಾನ ಹೇಳಿದರು.
ರವಿವಾರ ರಾತ್ರಿ ಬೈಕಿನಲ್ಲಿ ಬಂದ ಅಪರಿಚಿತ ತಂಡವೊಂದು ಕನ್ಯಾನದ ಶಿರಂಕಲ್ಲು ಎಂಬಲ್ಲಿ ನಡೆದುಕೊಂಡು ಹೋಗುತ್ತಿದ್ದ ಅಬ್ದುಲ್ ಮುಸ್ತಾಕ್ ಮೇಲೆ ಮಾರಕಾಸ್ತ್ರದಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ನಂತರ ಗಾಯಾಳುವನ್ನು ದೇರಳಕಟ್ಟೆ ಆಸ್ಪತ್ರೆಗೆ ಸಾಗಿಸಲಾಗಿತ್ತು. ಗಾಯಾಳುವನ್ನು ಭೇಟಿಯಾದ ಬಳಿಕ ದ.ಕ. ಜಿಲ್ಲಾ ಎಸ್ಪಿ ಅವರ ಜೊತೆ ಮಾತನಾಡಿದ ಸಚಿವ ಯು.ಟಿ.ಖಾದರ್ ಪೊಲೀಸ್ ವಿಶೇಷ ತಂಡ ರಚಿಸಿ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಕರ್ನಾಟಕ-ಕೇರಳ ಗಡಿ ಪ್ರದೇಶಗಳಲ್ಲಿ ಪೊಲೀಸ್ ಬಂದೋಬಸ್ತ್ ನ ವಿಶೇಷ ನಾಕಾಬಂದಿ ಮಾಡಿ ವಾಹನಗಳ ತಪಾಸಣೆ ನಡೆಸುವಂತೆ ಪೊಲೀಸರಿಗೆ ಸಚಿವ ಯು.ಟಿ. ಖಾದರ್ ಸೂಚಿಸಿದ್ದಾರೆ.