ಉಡುಪಿ ಜಿಲ್ಲೆಗೆ ಇನ್ನೊಂದು ಉಪವಿಭಾಗ: ಸಚಿವ ದೇಶಪಾಂಡೆ ಘೋಷಣೆ
ಪಡುಬಿದ್ರಿ, ಜೂ.18: ಉಡುಪಿಯನ್ನು ಕೇಂದ್ರವಾಗಿರಿಸಿ ಜಿಲ್ಲೆಗೆ ಇನ್ನೊಂದು ಉಪ ವಿಭಾಗವನ್ನು ಶೀಘ್ರವೇ ಮಂಜೂರು ಮಾಡಲಾಗುವುದು . ಕುಂದಾಪುರ ದೊಂದಿಗೆ ಉಡುಪಿಯಲ್ಲಿಯೂ ಉಪವಿಭಾಗ ತೆರೆಯಲು ಸರಕಾರ ಚಿಂತನೆ ನಡೆಸಿದೆ ಎಂದು ರಾಜ್ಯ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ.
ಕಾಪುವಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕರಾದ ಐವನ್ ಡಿಸೋಜಾ ಮತ್ತು ಲಾಲಾಜಿ ಮೆಂಡನ್ ಜಿಲ್ಲೆಗೆ ಇನ್ನೊಂದು ಉಪವಿಭಾಗದ ಅಗತ್ಯತೆಯ ಕುರಿತು ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಸಚಿವರು ಈ ಘೋಷಣೆ ಮಾಡಿದರು.
ಉಡುಪಿ ಜಿಲ್ಲೆಯಲ್ಲಿ ಪ್ರಸ್ತುತ ಒಂದೇ ಕಂದಾಯ ಉಪವಿಭಾಗ ಇರುವು ದರಿಂದ ಇಡೀ ಜಿಲ್ಲೆಯ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವುದು ರಾಜ್ಯ ಸರಕಾರದ ಗಮನಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ಉಡುಪಿ ಕೇಂದ್ರವಾಗಿರಿಸಿ ಇನ್ನೊಂದು ಉಪ ವಿಭಾಗವನ್ನು ಶೀಘ್ರದಲ್ಲೇ ಮಂಜೂರು ಮಾಡಲಾಗುವುದು ಎಂದರು.
ಪೂರ್ಣಪ್ರಮಾಣದ ತಾಲೂಕಾಗಿ ಪರಿವರ್ತನೆಗೊಂಡಿರುವ ಕಾಪುವಿಗೆ ಮಿನಿವಿಧಾನ ಸೌಧ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು ಶೀಘ್ರದಲ್ಲೇ ಅನುದಾನ ಬಿಡುಗಡೆಗೊಳಿಸಲಾಗುವು ು ಕಂದಾಯ ಸಚಿವರು ನುಡಿದರು.
ಇದೇ ಸಂದರ್ಭದಲ್ಲಿ ಸಚಿವರು ಹೆಜಮಾಡಿ ಕೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ಕಾಪು, ಪಕೀರ್ಣಕಟ್ಟೆ, ಹೆಜಮಾಡಿ ಮತ್ತಿತರ ಕಡೆಗಳಿಗೆ ಭೇಟಿ ನೀಡಿ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು. ಬಳಿಕ ಕಾಪು ಹಳೆ ಮಾರಿಗುಡಿಯನ್ನು ಸಂದರ್ಶಿಸಿ ಮಾರಿಯಮ್ಮ ದೇವಿಯ ದರ್ಶನ ಪಡೆದರು.
ಈ ವೇಳೆ ಕಂದಾಯ ಸಚಿವರ ಸಂಸದೀಯ ಕಾರ್ಯದರ್ಶಿ ಐವನ್ ಡಿಸೋಜಾ, ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ತಾಲೂಕು ಪಂಚಾಯತ್ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿಲ್ಲಾ ಪಂಚಾಯತ್ ಸದಸ್ಯೆ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಸ್ವಾಗತಿಸಿದರು. ಉಪ ವಿಭಾಗಾಧಿಕಾರಿ ಮಧುಕೇಶ್ವರ್ ವಂದಿಸಿದರು.