ಉಡುಪಿ: ಇಸ್ರೇಲ್ ಅಧ್ಯಯನ ಪ್ರವಾಸ ತೆರಳಲಿರುವ ಸಹಕಾರಿಗಳಿಗೆ ಬೀಳ್ಕೊಡುಗೆ
ಉಡುಪಿ, ಜೂ.19: ಇಸ್ರೇಲ್ ದೇಶಕ್ಕೆ ಅಧ್ಯಯನ ಪ್ರವಾಸ ತೆರಳಿರುವ ಉಡುಪಿ ಜಿಲ್ಲೆಯ 15 ಮಂದಿ ಸಹಕಾರಿಗಳಿಗೆ ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ಬೀಳ್ಕೊಡುಗೆ ಸಮಾರಂಭವನ್ನು ಬುಧವಾರ ಉಡುಪಿಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಡಾ.ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಸಹಕಾರಿಗಳ ತಂಡವು ಇಸ್ರೇಲ್ಗೆ ತೆರಳಿ ಕುರಿ ಸಾಕಣೆ, ಹಾಲಿನ ಉತ್ಪಾದನೆ, ನೀರಾವರಿ, ಸಾವಯವ ಕೃಷಿ ಮತ್ತು ಉತ್ಪನ್ನಗಳ ಕುರಿತು ಅಧ್ಯಯನ ಮಾಡಲಿದೆ. ಈ ತಂಡ ಅಲ್ಲಿ ತಿಳಿದುಕೊಂಡ ವಿಚಾರದ ಮಾಹಿತಿಯನ್ನು ತಮ್ಮ ಸಹಕಾರಿ ವ್ಯಾಪ್ತಿಯ ರೈತರಿಗೆ ನೀಡುವ ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ವತಿಯಿಂದ ಜೂ.20ರಿಂದ 26ರವರೆಗೆ ಪ್ರವಾಸ ತೆರಳಲಿರುವ ತಂಡದಲ್ಲಿ ಉಡುಪಿ ಜಿಲ್ಲೆಯ ಉಡುಪಿ ತಾಲೂಕಿನ 11, ಕುಂದಾಪುರ ಹಾಗೂ ಕಾರ್ಕಳ ತಾಲೂಕಿನ ತಲಾ ಇಬ್ಬರು ಪ್ರಾಥಮಿಕ ಕೃಷಿ ಮತ್ತು ಸಹಕಾರ ಸಂಘಗಳ ಅಧ್ಯಕ್ಷರು ಭಾಗ ವಹಿಸಲಿರುವರು ಎಂದರು.
ಜಿಲ್ಲಾ ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್ ತಂಡಕ್ಕೆ ಶುಭ ಹಾರೈಸಿದರು. ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ರಾದ ಅಶೋಕ್ ಕುಮಾರ್ ಶೆಟ್ಟಿ, ಮಹೇಶ್ ಹೆಗ್ಡೆ, ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಯೂನಿಯನ್ ನಿರ್ದೇಶಕ ಗೋಪಿ ಕೃಷ್ಣ ಉಪಸ್ಥಿತರಿದ್ದರು. ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.