ಕಾಸರಗೋಡು: ಗುಡುಗು-ಮಿಂಚು ಸಹಿತ ಭಾರೀ ಮಳೆಗೆ ಅಪಾರ ಹಾನಿ
ಕಾಸರಗೋಡು, ಜೂ.20: ಜಿಲ್ಲೆಯಲ್ಲಿ ಬುಧವಾರ ರಾತ್ರಿ ಗುಡುಗು ಮಿಂಚಿನಿಂದ ಕೂಡಿದ ಭಾರೀ ಮಳೆಯಾಗಿದ್ದು, ಹಲವೆಡೆ ಅಪಾರ ಹಾನಿ ಉಂಟಾಗಿದೆ.
ಬೇಳ, ಕುಂಟಿಕಾನ, ಮಾಡತ್ತಡ್ಕದಲ್ಲಿ ಮನೆಗೆ ಸಿಡಿಲು ಬಡಿದು ಅಪಾರ ನಾಶ ನಷ್ಟ ಉಂಟಾಗಿದೆ. ಜೋನಿ ಡಿಸೋಜ ಎಂಬವರ ಮನೆಗೆ ಸಿಡಿಲು ಬಡಿದಿದೆ. ವಿದ್ಯುತ್ ಉಪಕರಣಗಳು ಸಂಪೂರ್ಣ ಭಸ್ಮವಾಗಿವೆ. ಮನೆಯ ಗೋಡೆ ಬಿರುಕು ಬಿಟ್ಟಿದೆ. ಮನೆಯ ಮುಂಭಾಗದಲ್ಲಿ ಹಾಕಲಾಗಿದ್ದ ಸಿಮೆಂಟ್ ಶೀಟ್ ಗಳು ಸಂಪೂರ್ಣ ನೆಲಕಚ್ಚಿವೆ. ಮನೆಗೂ ಹಾನಿ ಉಂಟಾಗಿದೆ. ಮುಂಜಾನೆ ವೇಳೆ ಮನೆಗೆ ಸಿಡಿಲಿನ ಬಡಿದಿದ್ದು, ಮನೆಯಲ್ಲಿದ್ದವರು ಸಣ್ಣಪುಟ್ಟ ಗಾಯಗೊಂಡಿದ್ದಾರೆ .
ಬದಿಯಡ್ಕ ಕಿನ್ನಿಮಾಣಿಯ ಲೀಲಾವತಿ, ನಾರಾಯಣ ನಾಯ್ಕ್, ಸರಸ್ವತಿ, ರಾಧಾಕೃಷ್ಣ ಮೊದಲಾದವರ ಮನೆಗೆ ನೀರು ನುಗ್ಗಿದೆ.
ಪುತ್ತಿಗೆ ಅರಿಯಪ್ಪಾಡಿ ಕಾಲನಿಯಲ್ಲಿ ಬಾವಿಯೊಂದರ ಆವರಣ ಕುಸಿದಿದೆ.
ಮುಗು ಸರಕಾರಿ ಎಲ್.ಪಿ. ಶಾಲಾ ಆವರಣ ಗೋಡೆ ಕುಸಿದಿದೆ. ಬುಧವಾರ ಸಂಜೆಯ ಬಳಿಕ ಜಿಲ್ಲೆಯಲ್ಲಿ ಗುಡುಗು ಮಿಂಚು ಸಹಿತ ಭಾರೀ ಮಳೆಯಾಗಿದ್ದು, ಹಲವೆಡೆ ಅಪಾರ ಹಾನಿ ಸಂಭವಿಸಿರುವುದು ವರದಿಯಾಗಿದೆ.