ಬಂಟ ಯಾನೆ ನಾಡವರ ಮಾತೃ ಸಂಘದಿಂದ ಡಿ.ಕೆ. ಚೌಟ, ಸೀತಾರಾಮ ಶೆಟ್ಟಿಗೆ ಶ್ರದ್ಧಾಂಜಲಿ, ನುಡಿನಮನ
ಮಂಗಳೂರು, ಜೂ. 20: ದಕ್ಷಿಣ ಕನ್ನಡ ಬಂಟರ ಯಾನೆ ನಾಡವರ ಮಾತೃ ಸಂಘದ ವತಿಯಿಂದ ನಗರದ ಬಂಟ್ಸ್ ಹಾಸ್ಟೆಲ್ ಸಭಾಂಗಣದಲ್ಲಿಂದು ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿಯವರ ಅಧ್ಯಕ್ಷತೆಯಲ್ಲಿ ಅಗಲಿದ ಹಿರಿಯ ನ್ಯಾಯವಾದಿ ಹಾಗೂ ಖ್ಯಾತ ಸಾಹಿತಿ ದರ್ಬೆ ಡಾ.ಕೃಷ್ಣಾನಂದ ಚೌಟ ಇವರಿಗೆ ನುಡಿನಮನದೊಂದಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಗಣ್ಯರಿಂದ ನುಡಿನಮನ
‘‘ಸೀತಾರಾಮ ಶೆಟ್ಟಿ ನ್ಯಾಯವಾದಿಯಾಗಿ, ಧಾರ್ಮಿಕ ಕ್ಷೇತ್ರದಲ್ಲಿ ಸಮಾಜದ ಗನ ಸೆಳೆಯುವ ಸಾಧನೆ ಮಾಡಿದ ವ್ಯಕ್ತಿಯಾಗಿ ಎಲ್ಲಾ ಸಮಾಜದ ಪ್ರೀತಿಗೆ ಪಾತ್ರರಾಗಿದ್ದರು. ಡಿ.ಕೆ.ಚೌಟರು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರ ಜೊತೆಗೆ ಸಮಾಜದ ವಿವಿಧ ರಂಗಗಳಲ್ಲಿ ಮಹತ್ವದ ಸಾಧನೆ ಮಾಡಿ ಕೊಡುಗೆ ನೀಡಿದವರು’’
- ಅಜಿತ್ ಕುಮಾರ್ ರೈ ಮಾಲಾಡಿ ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ.
‘‘ಖ್ಯಾತ ನ್ಯಾಯವಾದಿ ಮಹಾಬಲ ಭಂಡಾರಿಯವರ ಶಿಷ್ಯರಾಗಿ ಗುರುವಿನಂತೆ ಖ್ಯಾತ ನ್ಯಾಯವಾದಿಯಾಗಿ ವೃತ್ತಿಯಲ್ಲಿ ತನ್ನ ಕಕ್ಷಿದಾರನಿಗೆ ನ್ಯಾಯ ಒದಗಿಸಿಕೊಡುವಲ್ಲಿ ಶ್ರಮ ವಹಿಸಿ ವೃತ್ತಿಯಲ್ಲಿ ಸಾಧನೆ ಮಾಡಿದವರು ತಮ್ಮ ಸಾಧನೆಯ ಮೂಲಕ ನ್ಯಾಯಾಂಗ ಕ್ಷೇತ್ರದಲ್ಲಿ ಸರಕಾರದ ವಿವಿಧ ಆಯೋಗಗಳಲ್ಲಿ ಅಭಿಯೋಜಕರಾಗಿ ನಿಯೋಜನೆಗೊಂಡು ರಾಷ್ಟ್ರ ಮಟ್ಟದಲ್ಲಿ ಸೀತಾರಾಮ ಶೆಟ್ಟಿ ಶ್ರೇಷ್ಠ ಸಾಧನೆ ಮಾಡಿದ ಸರಳ ಸಜ್ಜನಿಕೆಯ ನಾಯಕತ್ವದ ಗುಣಹೊಂದಿದ್ದ ವ್ಯಕ್ತಿಯಾಗಿದ್ದರು’’
-ಹಿರಿಯ ನ್ಯಾಯವಾದಿ ಕಳ್ಳಿಗೆ ತಾರಾನಾಥ ಶೆಟ್ಟಿ.
‘‘ಕಲೆ , ಸಾಹಿತ್ಯ, ಕೃಷಿ ಸೇರಿದಂತೆ ಸಮಾಜದ ವಿವಿಧ ರಂಗದಲ್ಲಿ ಸಾಧನೆ ಮಾಡಿದ ಡಿ.ಕೆ.ಚೌಟರು ಮೇರು ವ್ಯಕ್ತಿತ್ವವನ್ನು ಹೊಂದಿದವರು. ಸಮಾಜದ ಎಲ್ಲಾ ಜಾತಿ, ಧರ್ಮದ ಜನರ ಪ್ರೀತಿಗೆ ಪಾತ್ರರಾಗಿದ್ದ ಕೃಷ್ಣಾನಂದ ಚೌಟರು ಬಹುಮುಖ ಪ್ರತಿಭೆಯ ವ್ಯಕಿತ್ತತ್ವ ವನ್ನು ಹೊಂದಿದ್ದರು. ಗಡಿನಾಡಿನಲ್ಲಿದ್ದು ಕನ್ನಡ ಪರ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದರು ’’
-ಉಪನ್ಯಾಸಕ ಭಾಸ್ಕರ ರೈ ಕುಕ್ಕುವಳ್ಳಿ.
‘‘ಕಾಸರಗೋಡಿನ ಮೀಯಪದವಿನಲ್ಲಿ ಒಂದು ಕಡೆ ಮಂಜಲ್ತೋಡಿಯಲ್ಲಿ ಇನ್ನೊಂದು ಕಡೆ ಕಳ್ಳಿಗೆ ನಡುವೆ ಉಪ್ಪಳ ನದಿ ಹರಿಯುವ ಪ್ರದೇಶ ಅಲ್ಲಿ ದರ್ಬೆ ಎನ್ನುವ ಪ್ರದೇಶದಲ್ಲಿ ಕೃಷ್ಣಾನಂದ ಚೌಟರು ಕೃಷಿ ಭೂಮಿಯನ್ನು ಖರೀದಿಸಿ ಕೃಷಿಯಲ್ಲಿ ಮಹತ್ವದ ಸಾಧನೆ ಮಾಡಿದ ಸಾದಕ, ಅಲ್ಲದೆ ರಂಗ ಭೂಮಿ, ಸಾಹಿತ್ಯ ಕ್ಷೇತ್ರದಲ್ಲಿ ಮಹತ್ವದ ಕೃತಿ ರಚಿಸಿ ಕೊಡುಗೆ ನೀಡಿದ ವ್ಯಕ್ತಿಯಾಗಿದ್ದರು’’
-ಸತೀಶ್ ಅಡಪ ಡಿ.ಕೆ.ಚೌಟರ ನಿಕಟ ವರ್ತಿ
ಸಮಾರಂಭದಲ್ಲಿ ಸೀತಾರಾಮ ಶೆಟ್ಟಿಯವರ ಪುತ್ರ ಮನೋಜ್ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.