ಚೌಟರದು ತುಳು ಬದುಕಿನ ಮಾದರಿ ವ್ಯಕ್ತಿತ್ವ: ಭಾಸ್ಕರ ರೈ ಕುಕ್ಕುವಳ್ಳಿ
ಮಂಗಳೂರು: 'ದರ್ಬೆ ಕೃಷ್ಣಾನಂದ ಚೌಟರು ತುಳುಭಾಷೆಯ ಸತ್ವಯುತ ಬರಹಗಾರ. ಕೃಷಿ, ಉದ್ಯಮ, ಸಾಹಿತ್ಯ, ರಂಗಭೂಮಿ, ಚಿತ್ರಕಲೆ, ಸಂಘಟನೆ - ಸಮಾಜಸೇವೆ ಹೀಗೆ ಅನ್ಯಾನ್ಯ ಕ್ಷೇತ್ರದಲ್ಲಿ ಮಾಗಿದ ಹಿರಿಯರು. ಅವರದು ತುಳು ಬದುಕಿನ ಮಾದರಿ ವ್ಯಕ್ತಿತ್ವ' ಎಂದು ಲೇಖಕ, ಅರ್ಥಧಾರಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ.
ತುಳುವರ್ಲ್ಡ್ ವತಿಯಿಂದ ನಗರದ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ಜರಗಿದ ಡಾ.ಡಿ.ಕೆ.ಚೌಟ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿನಮನ ಸಲ್ಲಿಸಿ ಅವರು ಮಾತನಾಡಿದರು.
' ತುಳುಭಾಷೆಯಲ್ಲಿ ಪ್ರಶಸ್ತಿ ವಿಜೇತ ಕಾದಂಬರಿಕಾರರಾಗಿ, ಶ್ರೇಷ್ಠ ನಾಟಕಕಾರರಾಗಿ ಕರಾವಳಿಯ ಸುಂದರ ಸಂಸ್ಕ್ರತಿಯನ್ನು ತಮ್ಮ ಕೃತಿಗಳಲ್ಲಿ ಸಮರ್ಥವಾಗಿ ಕಟ್ಟಿಕೊಟ್ಟ ಚೌಟರು ಸಾರಸ್ವತ ಲೋಕದ ಗಟ್ಟಿ ಕುಳ. ಆನಂದ ಕೃಷ್ಣ ಎಂಬ ಹೆಸರಿನಿಂದ ಅವರು ಬರೆದುದೆಲ್ಲವೂ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ' ಎಂದವರು ನುಡಿದರು.
ಈ ಸಂದರ್ಭ ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಸದಸ್ಯ ಎ.ಶಿವಾನಂದ ಕರ್ಕೇರ, ಕಲಾವಿದ ತೋನ್ಸೆ ಪುಷ್ಕಳ ಕುಮಾರ್, ಎಂ. ವಿಶ್ವನಾಥ ಶೆಟ್ಟಿ ತೀರ್ಥಹಳ್ಳಿ, ಜೀವಿಯಸ್ ಉಳ್ಳಾಲ್, ಹರ್ಷ ರೈ ಪುತ್ರಕಳ, ಭೂಷಣ್ ಕುಲಾಲ್, ಪ್ರೇಮ್, ಅನಂತಕುಮಾರ್ ಬರ್ಲ, ಶಮೀನಾ ಆಳ್ವ ಮುಲ್ಕಿ, ಆಶಾ ಹೆಗ್ಡೆ, ವೀಣಾ ಜೆ.ಶೆಟ್ಟಿ ಉಪಸ್ಥಿತರಿದ್ದರು.
ತುಳುವರ್ಲ್ಡ್ ಸಂಚಾಲಕ ರಾಜೇಶ್ ಆಳ್ವ ಬದಿಯಡ್ಕ ಸ್ವಾಗತಿಸಿದರು. ಕಡಬ ದಿನೇಶ್ ರೈ ವಂದಿಸಿದರು. ಸಭೆಯಲ್ಲಿ ಮೌನ ಪ್ರಾರ್ಥನೆಯೊಂದಿಗೆ ಅಗಲಿದ ಡಿ.ಕೆ.ಚೌಟರಿಗೆ ಸಾಮೂಹಿಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.