ಯೋಗ ಎಂಬುದು ಪ್ರಪಂಚಕ್ಕೆ ಭಾರತದ ಸನಾತನ ಪರಂಪರೆಯ ಕೊಡುಗೆ: ಡಾ. ಪಾಂಡುರಂಗ ನಾಯಕ
ಭಟ್ಕಳ: ಯೋಗವೆಂದರೆ ಕೇವಲ ಆಸನ, ಪ್ರಾಣಾಯಾಮವಲ್ಲ. ವರ್ತಮಾನದಲ್ಲಿ, ದೇಹ ಮತ್ತು ಮನಸನ್ನು ಸಂಯೋಗಗೊಳಿಸುವ ವಿಧಾನ. ಯೋಗವು ಜೀವನ ಕ್ರಮದ ಅಂಗವಾದಾಗ ಸ್ವಸ್ಥ ಮನಸ್ಸು ಸ್ವಸ್ಥ ದೇಹ ನಮ್ಮದಾಗುತ್ತದೆಯಲ್ಲದೇ ಸಂತಸದ ಬದುಕು ನಮ್ಮದಾಗುತ್ತದೆ. ಯೋಗಕ್ಕೆ ಬದುಕನ್ನು ಸಂತಸಮಯಗೊಳಿಸುವ ಶಕ್ತಿಯಿದೆ. ಯೋಗ ಎಂಬುದು ಪ್ರಪಂಚಕ್ಕೆ ಭಾರತದ ಸನಾತನ ಪರಂಪರೆಯ ಕೊಡುಗೆ ಎಂದು ಡಾ. ಪಾಂಡುರಂಗ ನಾಯಕ ನುಡಿದರು. ಅವರು ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿಶ್ವ ಯೋಗದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಭಟ್ಕಳ ಎಜುಕೇಶನ್ ಟ್ರಸ್ಟನ ಅಧ್ಯಕ್ಷ ಡಾ.ಸುರೇಶ ನಾಯಕ ಮಾತನಾಡಿ ಯೋಗವನ್ನು ದಿನಚರಿಯ ಭಾಗವಾಗಿ ಮಾಡಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.ಪ್ರಶಿಕ್ಷಕರು ಯೋಗಾಚರಣೆ ಮಾಡಿ, ಭಾವಿ ಜೀವನದಲ್ಲಿ ವಿದ್ಯಾರ್ಥಿಗಳಲ್ಲೂ ಯೋಗಾಭ್ಯಾಸವನ್ನು ಅಳವಡಿಸಿಕೊಳ್ಳಲು ಕಾರ್ಯೋನ್ಮುಖರಾಗಬೇಕೆಂದರು. ಕಾಲೇಜಿನ ಪ್ರಾಚಾರ್ಯ ಡಾ.ಆರ್.ನರಸಿಂಹಮೂರ್ತಿ ಪ್ರಾಸ್ಥಾವಿಕ ನುಡಿಗಳನ್ನಾಡಿ ಯೋಗದ ಮಹತ್ವ ಹಾಗೂ ಅಂತರಾಷ್ಟ್ರೀಯ ಮನ್ನಣೆ ಪಡೆದ ಯೋಗ ನಮ್ಮ ಭಾರತದ್ದು ಎಂಬುದೇ ನಮಗೆ ಹೆಮ್ಮೆ ಎಂದರು.
ಕಾರ್ಯಕ್ರಮದಲ್ಲಿ ಪ್ರಶಿಕ್ಷಣಾರ್ಥಿಗಳಾದ ಸುಮಂಗಲಾ ಸಂಗಡಿಗರು ಪ್ರಾರ್ಥನೆ ನೆರವೇರಿಸಿದರು. ನೂತನ ಮೋಗೇರ ಹಾಗೂ ಪುಷ್ಪಾ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಕ ವೃಂದ ಹಾಗೂ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.