ಹೆಬ್ಬಾವಿನೊಂದಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾದ ವೆಂಕಟರಮಣ ನಾಯ್ಕ
ಭಟ್ಕಳ: ಹೆಬ್ಬಾವು ಕಚ್ಚಿದರೂ ವಿಚಲಿತನಾಗದೆ ಹೆಬ್ಬಾವು ಹೊತ್ತುಕೊಂಡೇ ಆಸ್ಪತ್ರೆಗೆ ಚಿಕಿತ್ಸೆ ದಾಖಲಾಗಿರುವ ಆಶ್ಚರ್ಯಕರ ಘಟನೆಯೊಂದು ಶುಕ್ರವಾರ ತಡರಾತ್ರಿ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಜರಗಿದೆ.
ಹೆಬ್ಬಾವು ಕಚ್ಚಿಕೊಂಡು ಗಾಯಗೊಂಡ ವ್ಯಕ್ತಿಯನ್ನು ಪುರವರ್ಗ ಪಂಚಾಯತ್ ವ್ಯಾಪ್ತಿಯ ವೆಂಕಟರಮಣ ನಾಯ್ಕ ಎಂದು ಗುರುತಿಸಲಾಗಿದೆ.
ಭಟ್ಕಳದಲ್ಲಿ ಕೆಲದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಸುರಿಯುತ್ತಿರುವ ಮಳೆಯಿಂದಾಗಿ ಚರಂಡಿ, ಕಾಲುವೆಗಳು ತುಂಬಿ ಹರಿಯುತ್ತಿವೆ. ಈ ಮಧ್ಯೆ ಹೆಬ್ಬಾವೊಂದು ಚೌಥನಿ ಹೊಳೆಯ ಬಳಿ ಹರಿಯುವ ನೀರಿನಲ್ಲಿ ಹರಿದು ಬಂದಿದ್ದು, ರಸ್ತೆಯಲ್ಲಿ ಮತ್ಯಾರಿಗಾದರೂ ಕಚ್ಚಿದರೆ ಅಪಾಯವಾಗುತ್ತದೆ ಎಂದು ತಿಳಿದ ಭಟ್ಕಳ ತಾಲ್ಲೂಕಿನ ಪುರವರ್ಗದ ವೆಂಕಟರಮಣ ನಾಯ್ಕ ಎಂಬ ವ್ಯಕ್ತಿ ತನ್ನ ಕೆಲವು ಸ್ನೇಹಿತರ ಸಹಾಯದಿಂದ ಹಾವನ್ನು ಸೆರೆಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ವೆಂಕಟರಮಣ ನಾಯ್ಕ ಎಂಬ ವ್ಯಕ್ತಿಗೆ ಹಾವು ಕಚ್ಚಿದೆ. ಹೆಬ್ಬಾವಿನಿಂದ ಕಚ್ಚಿಸಿಕೊಂಡ ಆತ ವಿಚಲಿತಗೊಳ್ಳದೆ , ಆರೇಳು ಅಡಿ ಉದ್ದದ ಹೆಬ್ಬಾವವನ್ನು ತಮ್ಮ ಸ್ನೇಹಿತರ ಸಹಾಯದೊಂದಿಗೆ ಹಿಡಿದುಕೊಂಡೇ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ವಿಷಯ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಬಂದು ಹಾವನ್ನು ಹಿಡಿದುಕೊಂಡು, ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದರು. ವೆಂಕಟರಮಣ ಅವರಿಗೆ ಭಟ್ಕಳ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.