ಕೇಶವ ಅಂಗಡಿಮಾರು ನಿಧನ
ಮಂಗಳೂರು, ಜೂ.23: ಕಂಕನಾಡಿ ಗರೋಡಿ ಬ್ರಹ್ಮಬೈದರ್ಕಳ ಕ್ಷೇತ್ರದ ಅಧ್ಯಕ್ಷರು, ಧಾರ್ಮಿಕ ಮುಂದಾಳು, ಜಪ್ಪಿನಮೊಗರು ನಿವಾಸಿ ಜೆ.ಕೇಶವ ಅಂಗಡಿಮಾರು (52) ಹೃದಯಾಘಾತದಿಂದ ರವಿವಾರ ನಿಧನರಾದರು.
ಶನಿವಾರ ಹಠಾತ್ ಅಸ್ವಸ್ಥಕ್ಕೀಡಾದ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಲಿಸದೆ ರವಿವಾರ ಸಂಜೆ ವೇಳೆಗೆ ಮೃತಪಟ್ಟಿದ್ದಾರೆ. ಇವರಿಗೆ ಪತ್ನಿ, ಮಕ್ಕಳು ಇದ್ದಾರೆ.
ಇವರು ಗೃಹರಕ್ಷಕದಳದಲ್ಲಿ ಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿ ಸೇವೆಗೆ ವಿಶೇಷ ಪ್ರಶಸ್ತಿ ಪಡೆದಿದ್ದರು. ಕಂಕನಾಡಿ ಗರೋಡಿ ಕ್ಷೇತ್ರದ ಅಧ್ಯಕ್ಷರಾಗಿ ನಾಲ್ಕು ತಿಂಗಳ ಹಿಂದೆಯಷ್ಟೇ ಆಯ್ಕೆಯಾಗಿದ್ದರು. ಧಾರ್ಮಿಕ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಇವರು ಕೊಡುಗೈದಾನಿಯಾಗಿ ಶಿಕ್ಷಣ ಸಂಸ್ಥೆ, ಸಂಘಸಂಸ್ಥೆಗಳಿಗೆ ನೆರವು ನೀಡಿದ್ದರು.
ಜಪ್ಪಿನಮೊಗರು ನಾರಾಯಣಗುರು ಮಂದಿರದ ಮಾಜಿ ಅಧ್ಯಕ್ಷ, ಜಪ್ಪಿನಮೊಗರು ಕಂರ್ಭಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ, ಸೂರ್ಯನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ, ಜಪ್ಪಿನಮೊಗರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ, ಜಪ್ಪಿನಮೊಗರು ಜಯ-ವಿಜಯ ಜೋಡುಕರೆ ಕಂಬಳದ ವ್ಯವಸ್ಥಾಪನಾ ಸಮಿತಿಯ ಪ್ರಧಾನ ಸಂಚಾಲಕರಾಗಿ, ಬಿಕರ್ನಕಟ್ಟೆ ಬಜ್ಜೋಡಿ ಶ್ರೀ ವೀರಮಾರುತಿ ವ್ಯಾಯಾಮ ಶಾಲೆಯ ಸ್ಥಾಪಕರಾಗಿದ್ದು, ಹಲವಾರು ಯುವಕರಿಗೆ ತಾಲೀಮು ತರಬೇತಿ ನೀಡುವ ಮೂಲಕ ಸೇವೆ ಸಲ್ಲಿಸಿದ್ದರು.
ನೂರಾರು ಮಂದಿಗೆ ಉದ್ಯೋಗದಾತರು: ಸುಮಾರು 30 ವರ್ಷಗಳಿಂದ ನಗರದಲ್ಲಿ ಸೆಂಟ್ರಿಂಗ್ ಕಂಟ್ರಾಕ್ಟ್ದಾರರಾಗಿದ್ದು, ನೂರಾರು ಮಂದಿಗೆ ಉದ್ಯೋಗ ನೀಡಿದವರು. ಇವರ ಅಂತ್ಯಕ್ರಿಯೆ ಸೋಮವಾರ 11ಗಂಟೆಗೆ ಜಪ್ಪಿನಮೊಗರು ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.