ನ.5-10: ಮಂಗಳೂರಿನಲ್ಲಿ ರಾಷ್ಟ್ರಮಟ್ಟದ ಮುಯೆಥೈ ಚಾಂಪಿಯನ್ ಕ್ರೀಡಾಕೂಟ
ಮಂಗಳೂರು, ಜೂ.24: ನಗರದಲ್ಲಿ ಮುಯೆಥೈ ಕ್ರೀಡೆಯಲ್ಲಿ ಆಸಕ್ತಿ ವಹಿಸಿರುವ ಯುವಕರ ತಂಡವಿದೆ. ಇಂತಹ ಯುವ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮತ್ತು ಕ್ರೀಡೆಯನ್ನು ಇನ್ನಷ್ಟು ಪ್ರಚಾರ ಮಾಡುವ ದೃಷ್ಟಿಯಿಂದ ಈ ವರ್ಷದ ರಾಷ್ಟ್ರ ಮಟ್ಟದ ಮುಯೆಥೈ ಚಾಂಪಿಯನ್ ಕ್ರೀಡಾ ಕೂಟವನ್ನು ರಾಜ್ಯದ ಮಂಗಳೂರಿನಲ್ಲಿ ನವೆಂಬರ್ 5ರಿಂದ 10ರವರೆಗೆ ಪಣಂಬೂರು ಬೀಚ್ನಲ್ಲಿ ಹಮ್ಮಿಕೊಳ್ಳಲು ನಿರ್ಧರಿಸುವುದು ಸ್ವಾಗತಾರ್ಹ ನಿರ್ಧಾರ. ಈ ಕ್ರೀಡಾಕೂಟವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಬೇಕಾಗಿದೆ. ಈ ಕ್ರೀಡಾಕೂಟ ಮಾದರಿ ಕ್ರೀಡಾಕೂಟವಾಗಿ ನಡೆಯುತ್ತದೆ ಎಂಬ ವಿಶ್ವಾಸ ನನಗಿದೆ. ಅದಕ್ಕೆ ಪೂರಕವಾದ ಸಂಘಟಕರ ತಂಡ ಮಂಗಳೂರಿನಲ್ಲಿದೆ ಎಂದು ಕರ್ನಾಟಕ ರಾಜ್ಯಮುಯೆಥೈ ಅಸೋಸಿಯೇಶನ್ನ ಗೌರವಾಧ್ಯಕ್ಷ ಸದಾನಂದ ಶೆಟ್ಟಿ ತಿಳಿಸಿದ್ದಾರೆ.
ನಗರದ ಬಲ್ಮಠದ ಸಂಸ್ಥೆಯ ಕಚೇರಿಯಲ್ಲಿಂದು ರಾಷ್ಟ್ರಮಟ್ಟದ ಮುಯೆಥೈ ಚಾಂಪಿಯನ್ ಕ್ರೀಡಾಕೂಟದ ಆತಿಥ್ಯವನ್ನು ವಹಿಸಿಕೊಳ್ಳುವ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ಈ ಹಿಂದೆ ಮಂಗಳೂರು ನಗರದಲ್ಲಿ ರಾಜ್ಯಮಟ್ಟದ ಮುಯೆಥೈ ಕ್ರೀಡಾ ಕೂಟವನ್ನು ಮಂಗಳೂರಿನ ತಂಡ ಅಚ್ಚು ಕಟ್ಟಾಗಿ ಸಂಯೋಜಿಸಿ ಪ್ರಶಂಸೆಗೆ ಪಾತ್ರವಾಗಿ ಈ ಬಾರಿಯೂ ಸಂಘಟನೆಯ ಅಧ್ಯಕ್ಷ ರಾಜ್ ಗೋಪಾಲ ರೈಯವರ ನೇತೃತ್ವದ ತಂಡ ರಾಷ್ಟ್ರಮಟ್ಟದ ಕ್ರೀಡಾ ಕೂಟದ ನಡೆಸಲು ಸಮರ್ಥವಾಗಿದೆ. ಮಂಗಳೂರಿನ ಪ್ರತಿಭೆಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರಮಟ್ಟದಲ್ಲಿ ಬೆಳಕಿಗೆ ಬರಲು ಈ ರೀತಿಯ ಕ್ರೀಡಾಕೂಟ ನಡೆಯಬೇಕಾಗಿದೆ ಎಂದು ಸದಾನಂದ ಶೆಟ್ಟಿ ತಿಳಿಸಿ ಶುಭ ಹಾರೈಸಿಸರು.
ಈ ಬಾರಿಯ ರಾಷ್ಟ್ರ ಮಟ್ಟದ ಕ್ರೀಡಾಕೂಟವನ್ನು ಮಂಗಳೂರಿನ ಹಮ್ಮಿಕೊಳ್ಳುವ ಬಗ್ಗೆ ರಾಷ್ಟ್ರಮಟ್ಟದ ಮುಯೆಥೈ ಕ್ರೀಡಾ ಸಂಘಟನೆಗಳ ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ನಗರದ ಪಣಂಬೂರು ಬೀಚ್ನಲ್ಲಿ ನ.5ರಿಂದ 10ವರಗೆ ಹಮ್ಮಿಕೊಳ್ಳುವುದು ಸೂಕ್ತ ಎಂದು ತೀರ್ಮಾನಿಸಿರುವುದಾಗಿ ಕರ್ನಾಟಕ ರಾಜ್ಯ ಮುಯೆಥೈ ಅಸೋಸಿಯೇಶನ್ನ ಅಧ್ಯಕ್ಷ ರಾಜಗೋಪಾಲ ರೈ ತಿಳಿಸಿದ್ದಾರೆ.
ರಾಜ್ಯ ಮುಯೆಥೈ ಅಸೊಶಿಯೇಶನ್ನ ತಾಂತಿಕ್ರ ವಿಭಾಗದ ಪ್ರಧಾನ ನಿರ್ದೇಶಕ ಹಾಗೂ ತರಬೇತುದಾರ ನಿತಿನ್ ಚಂದ್ರ ಕುಮಾರ್ ಮಾತನಾಡಿ ಮುಂದಿನ ದಿನಗಳಲ್ಲಿ ಕರ್ನಾಟಕ ಒಲಿಂಪಿಕ್ ಎಸೋಸಿಯೇಶನ್ ಮತ್ತು ರಾಜ್ಯ ಸರಕಾರದ ಮಾನ್ಯತೆ ಪಡೆಯುವ ನಿಟ್ಟಿನಲ್ಲಿ ಸಂಸ್ಥೆಯ ಮೂಲಕ ಪ್ರಯತ್ನಿಸುವ ಅಗತ್ಯವಿದೆ ಎಂದರು.ಇಲ್ಲದೆ ಹೋದಲ್ಲಿ ಪ್ರತಿಭಾವಂತ ಕ್ರೀಡಾಳುಗಳಿಗೆ ಆರ್ಥಿಕ ಹೊರೆಯನ್ನು ಭರಿಸುವುದು ಕಷ್ಟ ಎಂದು ಸಲಹೆ ನೀಡಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಮುಯೆಥೈ ಕ್ರೀಡಾಕೂಟವನ್ನು ಮಂಗಳೂರಿನಲ್ಲಿ ಹಮ್ಮಿಕೊಳ್ಳುತ್ತಿರುವುದು ಮಹತ್ವದ ಹೊಣೆಗಾರಿಕೆ ಎಂದರು.
ಪಣಂಬೂರು ಬೀಚ್ ನಿರ್ವಹಣಾ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ ಮಾತನಾಡುತ್ತಾ, ಮಂಗಳೂರಿನಲ್ಲಿ ಈ ಕ್ರೀಡೆಯನ್ನು ಹೆಚ್ಚು ಜನಪ್ರಿಯಗೊಳಿಸುವ ನಿಟ್ಟಿನಲ್ಲಿ ಈ ಕ್ರೀಡಾಕೂಟವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದರು.
ಕ್ರೀಡಾಪ್ರತಿಭೆಗಳು ಬೆಳಕಿಗೆ ಬರಲು ಇಂತಹ ಕ್ರೀಡಾಕೂಟದ ಸಂಘಟನೆ ಮಹತ್ವ ಪಡೆದಿದೆ ಎಂದು ಮಂಗಳೂರು ಮಹಾನಗರ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು ತಿಳಿಸಿದ್ದಾರೆ.
ಕ್ರೀಡಾ ಸಾದಕರಿಗೆ ಸನ್ಮಾನ: ರಾಷ್ಟ್ರಮಟ್ಟದ ಕರಾಟೆ ಪಂದ್ಯದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದು, ಹ್ಯಾಂಡ್ ಬಾಲ್ ಕ್ರೀಡೆಯಲ್ಲೂ ರಾಷ್ಟ್ರಮಟ್ಟದ ಪಂದ್ಯದಲ್ಲಿ ಭಾಗವಹಿಸಿ ಹಾಕಿಯಲ್ಲಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ ಅಂತಾರಾಷ್ಟ್ರೀಯ ನೆಲ್ಸನ್ ಮಂಡೇಲಾ ಪುರಸ್ಕಾರಕ್ಕೆ ಪಾತ್ರರಾಗಿರುವ ಕರ್ನಾಟಕ ರಾಜ್ಯಮುಯೆಥೈ ಅಸೋಸಿಯೇಶನ್ ಪ್ರತಿನಿಧಿ ಸಚಿನ್ ರಾಜ್ರನ್ನು ಸಮಾರಂಭದಲ್ಲಿಂದು ಸನ್ಮಾನಿಸಲಾಯಿತು.
ಜುಲೈ 20ರಿಂದ 30ರವರೆಗೆ ಥಾಲ್ಯಾಂಡ್ನ ಬ್ಯಾಂಕಾಕ್ನಲ್ಲಿ ನಡೆಯಲಿರುವ ಐಎಫ್ಎಂಎ ಸೀನಿಯರ್ ವರ್ಲ್ಡ ಚ್ಯಾಂಪಿಯನ್ ಶಿಫ್ ಸ್ಪರ್ಧೆಗೆ ಆಯ್ಕೆಗೊಂಡಿರುವ ಎಂಎಕೆ ಯ ಮಂಗಳೂರಿನ ಪ್ರತಿಭೆ ಅನ್ವಿತ ಆಳ್ವ ಮತ್ತು ಅಸ್ಸಾಂನಲ್ಲಿ 2019ರಲ್ಲಿ ನಡೆದ ರಾಷ್ಟ್ರೀಯ ಮುಯೆಥೈ ಜೂನಿಯರ್ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ ಬೆಳ್ಳಿ ಪದಕ ವಿಜೇತ ಪ್ರತೀಕ ಸಿರಿಯಾನ್ ರವರನ್ನು ಸಮಾರಂಭದಲ್ಲಿಂದು ಅತಿಥಿಗಳು ಸನ್ಮಾನಿಸಿದರು.
ಸಮಾರಂಭದಲ್ಲಿ ಮುಯೆಥೈ ಎಸೋಸೊಯೇಶನ್ನ ಜಿಲ್ಲಾಧ್ಯಕ್ಷ ವಿಕ್ರಂ ದತ್ತ್, ಉಪಾಧ್ಯಕ್ಷ ಇಲಿಯಾಸ್ ಸ್ಯಾಂಕ್ಟಿಸ್, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಗೌರವಾಧ್ಯಕ್ಷ ಚಂದ್ರಹಾಸ ಶೆಟ್ಟಿ, ದ.ಕ ಜಿಲ್ಲಾ ಫುಟ್ಬಾಲ್ ಎಸೋಸಿಯೇಶನ್ನ ಅಧ್ಯಕ್ಷ ಡಿ.ಎಂ.ಅಸ್ಲಾಂ, ಪಣಂಬೂರು ಬೀಚ್ ನಿರ್ವಹಣಾ ಸಮಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್ ಬೈಕಂಪಾಡಿ, ಕ್ರೀಡಾ ಸಂಘಟಕರಾದ ದೇವಿಚರಣ್ ಶೆಟ್ಟಿ, ಸಚಿನ್ ರಾಜ್ ರೈ, ಎಫ್ಎಟಿಎ ಸದಸ್ಯ ನರೇಂದ್ರ ರೈ ಹಾಗೂ ಮಂಕಿ ಮುಯೆಥೈ ಫೈಟ್ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.