ಮಾಹೆಯಲ್ಲಿ ಮಾದಕ ವಸ್ತು ವಿರೋಧಿ ದಿನಾಚರಣೆ
ಮಣಿಪಾಲ, ಜೂ.24:ಮಾಹೆಯ ಮಾದಕ ಹಾಗೂ ಮಾನಸಿಕ ವಸ್ತುಗಳ ಕೇಂದ್ರದ ವತಿಯಿಂದ ವಿಶ್ವಸಂಸ್ಥೆಯ ಮಾದಕ ವಸ್ತು ಹಾಗೂ ಅಕ್ರಮ ಸಾಗಾಟ ವಿರೋಧಿ ದಿನವನ್ನು ಜೂ.26ರಂದು ಅಪರಾಹ್ನ 2:30ಕ್ಕೆ ಮಣಿಪಾಲ ಕೆಎಂಸಿಯ ಇಂಟರ್ಯಾಕ್ಟ್ ಕಟ್ಟಡದಲ್ಲಿ ಆಚರಿಸಲಾಗುವುದು.
ಕಾರ್ಕಳದ ಸಹಾಯಕ ಪೊಲೀಸ್ ಅಧೀಕ್ಷಕ ಕೃಷ್ಣಕಾಂತ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ಕೇಂದ್ರದ ಮುಖ್ಯಸ್ಥ ಡಾ.ಜಿ. ಸುಕುಮಾರ್ ಮೆನನ್ ತಿಳಿಸಿದ್ದಾರೆ. ಅಂದು ಮುಂಬಯಿಯ ಬಾಂಬೆ ಹೆಂಪ್ ಕಂಪೆನಿ ಹಾಗೂ ಹೈದರಾಬಾದ್ ಮೂಲದ ಸೆಂಟರ್ ಫಾರ್ ಹ್ಯೂಮನ್ ಸೆಕ್ಯುರಿಟಿ ಸ್ಟಡೀಸ್ನೊಂದಿಗೆ ಮಾದಕವಸ್ತುಗಳ ಅಕ್ರಮ ಸಾಗಾಟಕ್ಕೆ, ಮಾದಕ ದ್ರವ್ಯಗಳಿಗೆ ಸಂಬಂಧಿಸಿದಂತೆ ಎರಡು ಒಪ್ಪಂದಗಳಿಗೆ ಸಹಿ ಹಾಕಲಾಗುವುದು ಎಂದವರು ತಿಳಿಸಿದರು.
ಮಾದಕ ದ್ರವ್ಯಕ್ಕೆ ಸಂಬಂಧಿಸಿದಂತೆ ಟಿವಿ ಧಾರಾವಾಹಿಯೊಂದನ್ನು ಕೃಷ್ಣಕಾಂತ್ ಅವರು ಬಿಡುಗಡೆಗೊಳಿಸಲಿದ್ದಾರೆ. ಮಾಹೆಯ ಕುಲಪತಿ ಡಾ.ವಿನೋದ್ ಭಟ್ ಅವರು ಮಾದಕ ದ್ರವ್ಯಗಳಿಗೆ ಸಂಬಂಧಿಸಿದ ಅಧ್ಯಯನ ವರದಿಯೊಂದನ್ನು ಬಿಡುಗಡೆಗೊಳಿಸುವರು ಎಂದು ಕೆಎಂಸಿಯ ಫೋರೆನ್ಸಿಕ್ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ವಿನೋದ್ ನಾಯಕ್ ತಿಳಿಸಿದರು.