ಯಕ್ಷನಂದನ ವಾರ್ಷಿಕೋತ್ಸವ: 28ರಂದು ಪಂಚವಟಿ ಪ್ರಸಂಗ ಪ್ರದರ್ಶನ
ಮಂಗಳೂರು, ಜೂ.25: ಪಿ.ವಿ. ಐತಾಳರ ಆಂಗ್ಲ ಯಕ್ಷಗಾನ ತಂಡವಾದ ಯಕ್ಷನಂದನದ 38ನೆ ವಾರ್ಷಿಕೋತ್ಸವದ ಅಂಗವಾಗಿ ಜೂ.28ರಂದು ನಗರದ ಪುರಭವನದಲ್ಲಿ ಪಂಚವಟಿ ಪ್ರಸಂಗ ಪ್ರದರ್ಶನಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಡಾ.ಪಿ.ಸತ್ಯಮೂರ್ತಿ ಐತಾಳ, ಪಿ. ಸಂತೋಷ್ ಏತಾಳರು ಬರೆದ ಪ್ರಸಂಗ ಇದಾಗಿದ್ದು, ಸಂಜೆ 5:15ರಿದ ರಾತ್ರಿ 9ರವರೆಗೆ ಪ್ರದರ್ಶನ ನಡೆಯಲಿದೆ ಎಂದರು.
ಅಧ್ಯಕ್ಷತೆಯನ್ನು ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ವಹಿಸಲಿದ್ದು, ಕಟೀಲು ಕ್ಷೇತ್ರದ ಕಮಲಾದೇವಿ ಅಸ್ರಣ್ಣ ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಸಂದರ್ಭ ಯಕ್ಷ ನಂದನದ ವತಿಯಿಂದ ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದರಾದ ಶಂಕರನಾರಾಯಣ ಮೈರ್ಪಾಡಿ (ಯಕ್ಷಗುರು), ನಾಗೇಶ್ ಕಾರಂತರನ್ನು ಸನ್ಮಾನಿಸಲಾಗುವುದು. ಅಲ್ಲದೆ ಬಿಕಾಂ ಪದವಿಯಲ್ಲಿ ದ್ವಿತೀಯ ರ್ಯಾಂಕ್ ಗಳಿಸಿದ ವೃಂದ ಕೊನ್ನಾರ್, 10ನೇ ತರಗತಿಯಲ್ಲಿ ಶೇ.99 ಅಂಕ ಗಳಿಸಿರುವ ಶಿವರಾಮ ಐತಾಳ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಎ.ರೋಹನ್ ರಾವ್ಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಿ.ಸಂತೋಷ್ ಐತಾಳ್, ರವಿ ಅಲೆವೂರಾಯ, ವೃಂದಾ ಕೊನ್ನಾರ್ ಉಪಸ್ಥಿತರಿದ್ದರು.