ಉಳ್ಳಾಲ: 'ದೆಹಲಿಯಲ್ಲಿ ಕನ್ನಡ ಚಟುವಟಿಕೆಗಳು' ಉಪಾನ್ಯಾಸ ಕಾರ್ಯಕ್ರಮ
ಉಳ್ಳಾಲ,ಜೂ.25: ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡವರಿಗೆ ಗೌರವದೊಂದಿಗೆ ಬದುಕನ್ನು ಕಟ್ಟಿಕೊಟ್ಟಿದ್ದು, ನನಗೂ ಸಾಹಿತ್ಯ ಬದುಕನ್ನು ಕಟ್ಟಿ ಕೊಟ್ಟಿದೆ ಎಂದು ಕವಿ, ದೆಹಲಿಯ ಹಿ.ಮಾ.ಶಾಲೆಯ ಕನ್ನಡ ಅಧ್ಯಾಪಕ ಅರವಿಂದ ಬಿಜೈ ಅಭಿಪ್ರಾಯಪಟ್ಟರು.
ಕೋಟೆಕಾರಿನ ಶ್ರೀ ಅಯ್ಯಪ್ಪ ಮಂದಿರದ ಸಭಾಂಗಣದಲ್ಲಿ ಉಳ್ಳಾಲ ವಲಯದ ಚುಟುಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ನಡೆದ 'ದೆಹಲಿಯಲ್ಲಿ ಕನ್ನಡ ಚಟುವಟಿಕೆಗಳು' ಎಂಬ ಉಪಾನ್ಯಾಸ ನೀಡಿ ಮಾತನಾಡಿದ ಅವರು ಹೊರನಾಡ ಕನ್ನಡಿಗರಲ್ಲಿ ಸಾಹಿತ್ಯದ ಕುರಿತು ಹೆಚ್ಚಿನ ಆಸಕ್ತಿಗಳು ಇವೆ ಅವರಿಗೆ ವೇದಿಕೆ ನೀಡುವ ಕಾರ್ಯ ಆಗಬೇಕು ದೆಹಲಿಯಲ್ಲಿ ಕನ್ನಡಿಗರಿಗೆ ಉತ್ತಮ ವೇದಿಕೆ ದೊರೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಚಟುವಟಿಕೆಗಳು ಆಗಬೇಕು ಎಂದರು.
ದ.ಕ.ಜಿ.ಚು. ಸಾ.ಪರಿಷತ್ತಿನ ಗೌರವಾಧ್ಯಕ್ಷ ಇರಾ ನೇಮು ಪೂಜಾರಿ ಮಾತನಾಡಿ ಕವಿತೆ ತಾನಾಗಿ ಒಲಿದು ಬರಬೇಕು. ಚುಟುಕ ಗಾತ್ರದಲ್ಲಿ ಚಿಕ್ಕದಾದರೂ ಪರಿಣಾಮಕಾರಿಯಾದುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪರಿಷತ್ತಿನ ಜಿಲ್ಲಾಧ್ಯಕ್ಷ ತಾರಾನಾಥ್ ಬೋಳಾರ್ ಮಾತನಾಡಿ ಸಂಘಟನೆಗಳ ಮೂಲಕ ಸಾಹಿತ್ಯ ಬೆಳೆಯುತ್ತದೆ ಎಂದು ಹೇಳಿದರು.
ಕವಿ, ಪತ್ರಕರ್ತ ಕೆ. ರಾಧಾಕೃಷ್ಣ ಉಳಿಯತ್ತಡ್ಕ ಮಾತನಾಡಿ ಸಾಹಿತ್ಯ ಆನಂದವನ್ನುಂಟು ಮಾಡಬೇಕು, ಪರಿಷತ್ತು ಕನ್ನಡ ಮನಸ್ಸುಗಳನ್ನು ಬೆಸೆದಿದೆ ಎಂದರು ಉಳ್ಳಾಲ ವಲಯದ ಚು. ಸಾ.ಪರಿಷತ್ತಿನ ಅಧ್ಯಕ್ಷ ಗುಣಾಜೆ ರಾಮ ಚಂದ್ರ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕವಿ ಹರೀಶ್ ಸುಲಾಯ ಒಡ್ಡಂಬೆಟ್ಟು, ಪತ್ರಕರ್ತ ಜೋನ್ ಡಿ'ಸೋಜ ಉಪಸ್ಥಿತರಿದ್ದರು.
ವಿಜಯ ಲಕ್ಷ್ಮೀ ಕಟೀಲು ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ್ ಗಟ್ಟಿ ಸ್ವಾಗತಿಸಿ, ವಂದಿಸಿದರು.