ಹೆಣ್ಣು ವಿದ್ಯೆ ಕಲಿತರೆ ಕುಟುಂಬವೇ ಸುಶಿಕ್ಷಿತ : ಅಶ್ರಫ್ ಸಖಾಫಿ
ಕಿನ್ನಿಗೋಳಿ: ಹೆಣ್ಣುಮಗಳೊಬ್ಬಳು ವಿದ್ಯೆ ಪಡೆದಲ್ಲಿ ಆಕೆ ಇಡೀ ಕುಟುಂಬಕ್ಕೆ ಆಸರೆಯಾಗುವುದರಲ್ಲಿ ಸಂಶಯವಿಲ್ಲ. ಆದ್ದರಿಂದ ಹೆಣ್ಣುಮಕ್ಕಳಿಗೆ ನೀಡುವ ವಿದ್ಯಾಭ್ಯಾಸವನ್ನು ನಿರರ್ಥಕ ಎಂದು ಭಾವಿಸಬಾರದಾಗಿ ಸುನ್ನೀ ಜಮ್ಮೀಯತುಲ್ ಉಲೆಮಾ ಉಡುಪಿ ಜಿಲ್ಲಾ ಅಧ್ಯಕ್ಷ ಶೈಖುನಾ ಮುಹಮ್ಮದ್ ಅಶ್ರಫ್ ಸಖಾಫಿ ಕಿನ್ಯ ಹೇಳಿದರು.
ಅವರು ಕಿನ್ನಿಗೋಳಿಯ ಬಟ್ಟಕೋಡಿಯಲ್ಲಿ ಮಾಲಿಕುದ್ದೀನ್ ಫೌಂಡೇಶನ್ ವತಿಯಿಂದ ನೂತನವಾಗಿ ಆರಂಭವಾದ ದೀನಾರಿಯ್ಯಾ ಇಸ್ಲಾಮಿಕ್ ವಿಮೆನ್ಸ್ ಶರೀಅತ್ ಕಾಲೇಜು ಉದ್ಘಾಟಿಸಿ ಮಾತನಾಡಿದರು.
ಹಿಂದಿನ ಕಾಲದಲ್ಲಿ ಮುಸ್ಲಿಂ ಯುವತಿಯರಿಗೆ ಶಿಕ್ಷಣ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದು ಪೂರಕ ವ್ಯವಸ್ಥೆಗಳು ಇದ್ದು, ಮುಸ್ಲಿಂ ಹೆಣ್ಣು ಮಕ್ಕಳು ಕೂಡಾ ಶಿಕ್ಷಣದಲ್ಲಿ ಮುಂದುವರೆಯಲು ಅಗತ್ಯ ಪ್ರೋತ್ಸಾಹ ಸಿಗುತ್ತಿದೆ. ಅಲ್ಲದೇ ಶಿಸ್ತುಬದ್ಧ ಶಿಕ್ಷಣ ಈ ಕಾಲದ ಬಹಮುಖ್ಯ ಅಗತ್ಯತೆಯಾಗಿದ್ದು, ಅದು ದೀನೀ (ಧಾರ್ಮಿಕ) ಶಿಕ್ಷಣ ವ್ಯವಸ್ಥೆಯಿಂದ ದೊರೆಯುವುದಾಗಿ ತಿಳಿಸಿದರು.
ಕಿನ್ನಿಗೋಳಿ ಜುಮಾ ಮಸೀದಿ ಖತೀಬ್ ಅಬ್ದುಲ್ ಲತೀಫ್ ಸಖಾಫಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಿವೃತ್ತ ಶಿಕ್ಷಕ ಸಿಪ್ರಿಯಾನ್ ಡಿಸೋಜಾ, ಮುಂಡ್ಕೂರು ಜುಮಾ ಮಸೀದಿ ಖತೀಬ್ ಅಬ್ದುಲ್ ರಝಾಕ್ ಸಅದಿ, ಸಿದ್ದೀಕ್ ಪುನರೂರು, ರಫೀಕ್ ಫ್ಲವರ್ ಗೋಳಿಜೋರ, ನಝೀರ್ ಗುತ್ತಕಾಡು ಉಪಸ್ಥಿತರಿದ್ದರು. ಅಶ್ರಫ್ ರಝಾ ಅಂಜದಿ ಕಾರ್ಯಕ್ರಮ ನಿರೂಪಿಸಿದರು.