ಬೆಳುವಾಯಿ: ಬಾವಿಗೆ ಬಿದ್ದ ಮಹಿಳೆಯ ರಕ್ಷಣೆ
ಮಹಿಳೆಯೊಬ್ಬರು ಅಕಸ್ಮಿಕವಾಗಿ ಕಾಲುಜಾರಿ 60 ಅಡಿ ಆಳದ ಬಾವಿಗೆ ಬಿದ್ದಿದ್ದು, ಸಕಾಲದಲ್ಲಿ ಸ್ಥಳಕ್ಕೆ ಆಗಮಿಸಿದ ಮೂಡುಬಿದಿರೆ ಅಗ್ನಿಶಾಮಕದಳದ ಸಿಬ್ಬಂದಿ ಮಹಿಳೆಯನ್ನು ರಕ್ಷಿಸಿದ ಘಟನೆ ಶನಿವಾರ ಬೆಳಗ್ಗೆ ಬೆಳುವಾಯಿಯಲ್ಲಿ ನಡೆದಿದೆ.
ಆನಂದ ಅಂಚನ್ ಎಂಬವರ ಪತ್ನಿ ಶೋಭಾ(45) ರಕ್ಷಿಸಲ್ಪಟ್ಟ ಮಹಿಳೆ. ಹತ್ತು ಅಡಿಯಷ್ಟು ನೀರಿದ್ದ ತನ್ನ ಮನೆಯ ಬಾವಿಗೆ ಈಕೆ ಆಕಸ್ಮಿಕವಾಗಿ ಕಾಲುಜಾರಿ ಬಿದ್ದಿದ್ದು ಸ್ಥಳೀಯರು ತಕ್ಷಣ ಅಗ್ನಿಶಾಮಕದಳಕ್ಕೆ ಸುದ್ದಿ ಮುಟ್ಟಿಸಿದರು. ಧಾವಿಸಿ ಬಂದ ಅಗ್ನಿಶಾಮಕದಳ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಪ್ರವೀಣ್ ನೇತೃತ್ವದಲ್ಲಿ ಪ್ರಮುಖ ಅಗ್ನಿಶಾಮಕ ಸಿಬಂದಿಯಾದ ಯೋಗೀಶ್ ಹಾಗೂ ಚಾಲಕ ಚಂದ್ರಶೇಖರ್, ಮನೋಹರ್ ಪ್ರಸಾದ್, ಉದಯ ಹೆಗ್ಡೆ, ಕೃಷ್ಣ ನಾಯ್ಕೆ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು.
Next Story