ಮನುಷ್ಯತ್ವದ ಉಳಿವಿಗಾಗಿ ಧರ್ಮಗಳು ಪರಸ್ಪರ ಕೈ ಜೋಡಿಸಲಿ: ಅಝೀಝ್ ದಾರಿಮಿ
ಮುಂಬಯಿ: ಜಾನಪದ ಸಿರಿವೈಭವ, ಸೌಹಾರ್ದೋತ್ಸವ ಕಾರ್ಯಕ್ರಮ
ಮುಂಬಯಿ, ಜು.8: ಮಾನವೀಯತೆ ಸಂಪೂರ್ಣ ನಾಶವಾಗುವ ಮೊದಲು ಮನುಷ್ಯತ್ವದ ಉಳಿವಿಗಾಗಿ ಧರ್ಮಗಳು ಪರಸ್ಪರ ಕೈ ಜೋಡಿಸಲಿ ಎಂದು ಮೌಲಾನಾ ಯು.ಕೆ.ಅಝೀಝ್ ದಾರಿಮಿ ಚೊಕ್ಕಬೆಟ್ಟು ಕರೆ ನೀಡಿದ್ದಾರೆ.
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಮತ್ತು ಮುಲುಂಡ್ ಫ್ರೆಂಡ್ಸ್ ಮುಂಬಯಿ ಇದರ ಆಶ್ರಯದಲ್ಲಿ ಜಾನಪದ ಸಿರಿವೈಭವ ಹಾಗೂ ಸೌಹಾರ್ದೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅನಾಗರಿಕತೆ ಮತ್ತು ಅರಾಜಕತೆಯನ್ನು ಧರ್ಮಗಳು ಹಳೆಯ ಕಾಲದಿಂದಲೇ ಹಿಮ್ಮೆಟ್ಟಿಸುತ್ತಾ ಬಂದಿದೆ. ಇದೀಗ ಅನಾಚಾರ, ಅತ್ಯಾಚಾರ, ಅನ್ಯಾಯ, ಅಕ್ರಮಗಳು ಧರ್ಮದ ಬುಡವನ್ನೇ ಅಲ್ಲಾಡಿಸುತ್ತಿದೆ. ಇದು ಎಲ್ಲಾ ಧರ್ಮಗಳಿಗೂ ಅಪಾಯ. ಆದ್ದರಿಂದ ಸಮಾಜದ ರಕ್ಷಣೆ ಗೆ ಎಲ್ಲಾ ಧರ್ಮ ಬಾಂಧವರು ಒಂದಾಗಬೇಕು ಎಂದವರು ಅಭಿಪ್ರಾಯಿಸಿದರು.
ತುಳು ನಾಡ ಸೃಷ್ಟಿ ವೈಭವ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಂವಾದ ಗೋಷ್ಠಿ ನಡೆಯಿತು.
ಕಾರ್ಯಕ್ರಮದ ಸಮಾರೋಪದ ಭಾಗವಾಗಿ ನಡೆದ ಸೌಹಾರ್ದೋತ್ಸವ ಕಾರ್ಯಕ್ರಮ ದ ಉದ್ಘಾಟನೆ ಯನ್ನು ಕಲ್ಪ ವೃಕ್ಷ ಕ್ಕೆ ನೀರೆರೆದು, ಪಾರಿವಾಳ ವನ್ನು ಹಾರಲು ಬಿಡುವುದರೊಂದಿಗೆ ನೆರವೇರಿಸಲಾಯಿತು.
ವಿದ್ವಾನ್ ಕೈರಬೆಟ್ಟು ವಿಶ್ವನಾಥ ಭಟ್ ಮತ್ತು ರೋನ್ ರೊಡ್ರಿಗಸ್ ಸೌಹಾರ್ದ ಸಂದೇಶಗಳನ್ನು ನೀಡಿದರು.
ಕರ್ನಾಟಕ ರಾಜ್ಯ ಜಾನಪದ ಪರಿಷತ್ತು ಅಧ್ಯಕ್ಷ ಟಿ.ತಿಮ್ಮೇ ಗೌಡ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಯು.ಬಿ.ವೆಂಕಟೇಶ್, ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ನ ಡಿ.ಸಂತೋಷ್ ಶೆಟ್ಟಿ, ಬಂಟರ ಒಕ್ಕೂಟದ ಅಧ್ಯಕ್ಷ ಐಕಲ ಹರೀಶ್ ಶೆಟ್ಟಿ, ಡಾ.ಸುರೇಂದ್ರ ವಿ. ಶೆಟ್ಟಿ, ಸುರೇಂದ್ರ ಕೆ. ಶೆಟ್ಟಿ, ಪಿ.ಎನ್.ಹೆಗ್ಡೆ, ರಿಸರ್ವ್ ಬ್ಯಾಂಕ್ ನಿವೃತ್ತ ಅಧಿಕಾರಿ ಪ್ರಭಾ ಎನ್. ಸುವರ್ಣ, ಡಾ.ಶಿವು ಮೂಡಿಗೆರೆ, ಅಶೋಕ್ ಶೆಟ್ಟಿ ಥಾಣೆ ಮುಂತಾದವರು ಭಾಗವಹಿಸಿದ್ದರು.
ಕರ್ನಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕ ಮತ್ತು ಮುಲುಂಡು ಫ್ರೆಂಡ್ಸ್ ಅಧ್ಯಕ್ಷರಾದ ಸುರೇಶ್ ಶೆಟ್ಟಿ ಯೆಯ್ಯಾಡಿ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಎನ್.ಪಿ.ಸುವರ್ಣ, ರೋಯ್ ರೊಡ್ರಿಗಸ್, ಇಸ್ಮಾಯೀಲ್ ಮೂಡುಶೆಡ್ಡೆಯವರನ್ನು ಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸಲಾಯಿತು.