ಉಚಿತ ಸವಲತ್ತುಗಳನ್ನು ಘನತೆಯಿಂದ ಬಳಸಿಕೊಳ್ಳೋಣ: ಪಟ್ಲ
ಉದ್ಯಾವರ, ಜು.11: ಇಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿ ಸರಕಾರ ಹತ್ತು ಹಲವು ಉಚಿತ ಸವಲತ್ತುಗಳನ್ನು ಒದಗಿಸುತ್ತಿದೆ. ಉಚಿತವಾಗಿ ಸಿಕ್ಕುವ ಈ ಸವಲತ್ತುಗಳನ್ನು ಘನತೆಯಿಂದ ಬಳಸಿಕೊಂಡಾಗ ಅವುಗಳ ಉದ್ದೇಶ ಈಡೇರುತ್ತದೆ. ಹಾಗೂ ಯೋಜನೆ ರೂಪಿಸಿದ ಸರಕಾರಗಳ ಪ್ರಯತ್ನ ಸಾರ್ಥಕತೆ ಪಡೆಯುತ್ತದೆ ಎಂದು ಸಿಜಿಕೆ ರಂಗ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ ಹಾಗೂ ಕಟಪಾಡಿ ಎಸ್ವಿಎಸ್ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಸಂತೋಷ್ ನಾಯಕ್ ಪಟ್ಲ ತಿಳಿಸಿದ್ದಾರೆ.
ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ 2018-19ನೇ ಸಾಲಿನ ವಿದ್ಯಾರ್ಥಿ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು. ವಿದ್ಯಾರ್ಥಿ ಗಳು ಜೀವನದಲ್ಲಿ ಓದುವುದನ್ನೇ ಗುರಿಯಾಗಿರಿಸಕೊಂಡು ಸೃಜನಶೀಲ ಕಲೆಗಳನ್ನು ತಿರಸ್ಕರಿಸಬಾರದು. ತಮ್ಮ ಬದುಕನ್ನು ರೂಪಿಸುವುದು ಕೇವಲ ಅಂಕಗಳು ಮಾತ್ರವಲ್ಲ; ನಾಟಕ, ನೃತ್ಯ, ಯಕ್ಷಗಾನಗಳಂತಹ ಕಲೆಗಳು ಕೂಡಾ ಬದುಕನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತವೆ ಎಂದರು.
ಇಂದು ಕನ್ನಡ ಮಾಧ್ಯಮ ಶಾಲೆಗಳನ್ನು ಕಟ್ಟಿ ಬೆಳೆಸುವುದು ಒಂದು ವಿಕ್ಷಿಪ್ತ ಸೃಜನಶೀಲತೆಯ ಸಂಕೇತ. ಯಾಕೆಂದರೆ ಈ ಕನ್ನಡ ಶಾಲೆಗಳಿಂದ ಯಾವುದೇ ವೈಯಕ್ತಿಕ ಲಾಭ ಇರದೆ ಮುಂದೊಂದು ದಿನ ಈ ಮಕ್ಕಳು ದೇಶದ ಭವಿಷ್ಯ ವಾಗುತ್ತಾರೆ ಎನ್ನುವ ಕಲ್ಪನೆಯು ವಿಕ್ಷಿಪ್ತ ಸೃಜನಶೀಲತೆಯಲ್ಲದೆ ವುತ್ತೇನು ಎಂದವರು ಪ್ರಶ್ನಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಮೊದಲು ಪ್ರೀತಿಸಲು ಕಲಿಯಬೇಕು. ಶಿಕ್ಷಕರನ್ನು, ಸಹಪಾಠಿಗಳನ್ನು, ಮನೆಯವರನ್ನು, ನೆರೆಹೊರೆಯವರು ಸೇರಿದಂತೆ ಎಲ್ಲರನ್ನು. ಋಣಾತ್ಮಕ ಅಂಶವನ್ನು ಮನಸ್ಸಿನಿಂದ ತೆಗೆದು ಹಾಕಿ, ಧನಾತ್ಮಕ ಅಂಶವನ್ನು ಮನಸ್ಸಿನಲ್ಲಿ ತಂದುಕೊಂಡರೆ ಮುಂದಿನ ಬದುಕು ಸುಂದರವಾಗುತ್ತದೆ ಎಂದರು.
ವೇದಿಕೆಯಲ್ಲಿ ಶಾಲಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗಣೇಶ್ ಕುಮಾರ್, ಶಾಲಾ ವಿದ್ಯಾರ್ಥಿ ನಾಯಕ ಮನ್ವಿತ್ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಗಣಪತಿ ಕಾರಂತ್ ಸ್ವಾಗತಿಸಿ, ಸಹ ಶಿಕ್ಷಕಿ ರತ್ನಾವತಿ ವಂದಿಸಿದರು. ಶಿಕ್ಷಕ ವಿಕ್ರಮ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.