ಆಯುಷ್ ಫೆಡರೇಷನ್ನಿಂದ ‘ಕುಟುಂಬೋತ್ಸವ’
ಉಡುಪಿ, ಜು.12:ಉಡುಪಿ ಜಿಲ್ಲಾ ಆಯುಷ್ ಫೆಡರನೇಷನ್ ಆಫ್ ಇಂಡಿಯಾ ವೈದ್ಯರ ಸಂಘಟನೆಯ ವೈದ್ಯರ ದಿನದ ‘ಕುಟುಂಬೋತ್ಸವ’ ಕಾರ್ಯಕ್ರಮ ಈ ಬಾರಿ ಹೊಟೇಲ್ ಕಿದಿಯೂರಿನ ಶೇಷಶಯನ ಸಭಾಂಗಣದಲ್ಲಿ ಜು.14ರಂದು ನಡೆಯಲಿದೆ ಎಂದು ಫೆಡರೇಷನ್ನ ಜಿಲ್ಲಾಧ್ಯಕ್ಷ ಡಾ.ಎನ್.ಟಿ.ಆಂಚನ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಆಂಚನ್, ಜಿಲ್ಲೆಯ ಆಯುರ್ವೇದ, ಯುನಾನಿ ಹಾಗೂ ಹೋಮಿಯೋಪಥಿ ವೈದ್ಯರ ಸಂಘಟನೆ ಇದಾಗಿದ್ದು, 600ಕ್ಕೂ ಅಧಿಕ ಸದಸ್ಯರನ್ನು ಒಳಗೊಂಡಿದೆ. ಇದರಲ್ಲಿ ವೈದ್ಯರ ಸಮ್ಮಿಲನ ಮಾತ್ರವಲ್ಲದೇ, ವೈದ್ಯ ಕುಟುಂಬದ ಸದಸ್ಯರಿಗಾಗಿ ವಿವಿಧ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಕಾರ್ಯಕ್ರಮವನ್ನು ರವಿವಾರ ಅಪರಾಹ್ನ 3:30ಕ್ಕೆ ಚಲನಚಿತ್ರ ನಟ ಸೂರ್ಯೋದಯ ಪೆರಂಪಳ್ಳಿ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪ್ರಭಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮ ಹಾಗೂ ಖ್ಯಾತ ಮೂಳೆತಜ್ಞ ಡಾ.ಭಾಸ್ಕರಾನಂದ ಕುಮಾರ್ ಪಾಲ್ಗೊಳ್ಳಲಿದ್ದಾರೆ ಎಂದರು.
ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ 40 ವರ್ಷಗಳ ಕಾಲ ವೈದ್ಯಕೀಯ ಸೇವೆಯನ್ನು ಸಲ್ಲಿಸುತ್ತಿರುವ ಜಿಲ್ಲೆಯ ಇಬ್ಬರು ಹಿರಿಯ ವೈದ್ಯರಾದ ಪೆರ್ಡೂರಿನ ಡಾ.ಜಿ.ಶ್ರೀಕೃಷ್ಣ ಭಟ್ ಹಾಗೂ ಕೊಡವೂರಿನ ಡಾ.ರಾಜ್ಗೋಪಾಲ್ ಅವರನ್ನು ಇದೇ ಸಂದರ್ಭದಲ್ಲಿ ‘ಆಯುಷ್ ವೈದ್ಯಸಿರಿ-19’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಡಾ.ಎನ್.ಟಿ.ಆಂಚನ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಫೆಡರೇಷನ್ನ ಕಾರ್ಯದರ್ಶಿ ಡಾ.ಸತೀಶ್ ರಾವ್, ಉಪಾಧ್ಯಕ್ಷ ಡಾ.ಉದಯಕುಮಾರ್ ಶೆಟ್ಟಿ, ಖಜಾಂಚಿ ಡಾ.ಜಯಲಕ್ಷ್ಮೀ ರಾವ್, ತಾಲೂಕು ಸಂಘದ ಕಾರ್ಯದರ್ಶಿ ಡಾ.ಸಂದೀಪ್ ಸನಿಲ್, ಡಾ.ಕೀರ್ತಿ ಪಾಲನ್, ಡಾ.ಶಿವಶಂಕರ್ ಉಪಸ್ಥಿತರಿದ್ದರು.