ಸುರತ್ಕಲ್ ಟೋಲ್ಗೇಟ್ನಲ್ಲಿ ಸ್ಥಳೀಯ ವಾಹನಗಳಿಗೆ ಶುಲ್ಕ: ಹೋರಾಟ ಸಮಿತಿ ತೀವ್ರ ವಿರೋಧ
ಮಂಗಳೂರು, ಜು.12: ಸುರತ್ಕಲ್ ಟೋಲ್ಗೇಟ್ನಲ್ಲಿ ಸ್ಥಳೀಯ ಖಾಸಗಿ ವಾಹನಗಳ ಸುಂಕ ವಿನಾಯಿತಿಯನ್ನು ರದ್ದುಗೊಳಿಸಿ ಜು.16ರಿಂದ ಕಡ್ಡಾಯ ಶುಲ್ಕ ಸಂಗ್ರಹಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ. ಜಿಲ್ಲಾಡಳಿತ ಶುಲ್ಕ ಸಂಗ್ರಹಕ್ಕೆ ಪೊಲೀಸ್ ರಕ್ಷಣೆ ಒದಗಿಸಲು ನಿರ್ಧರಿಸಿರುವು ದನ್ನು ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿಯು ತೀವ್ರವಾಗಿ ಖಂಡಿಸಿದೆ.
ನಿಯಮದ ಪ್ರಕಾರ ಸುಂಕ ವಸೂಲಿಯೇ ಅಕ್ರಮವಾಗಿದೆ. ಸ್ವತಃ ಹೆದ್ದಾರಿ ಪ್ರಾಧಿಕಾರವೇ ಮುಚ್ಚಲು ತೀರ್ಮಾನ ಕೈಗೊಂಡಿರುವ ಟೋಲ್ ಗೇಟ್ನಲ್ಲಿ ಯಾವುದೇ ಕಾರಣಕ್ಕೂ ಸ್ಥಳೀಯ ವಾಹನಗಳಿಂದ ಟೋಲ್ ಸಂಗ್ರಹಿಸಲು ಹೋರಾಟ ಸಮಿತಿ ಅವಕಾಶ ನೀಡುವುದಿಲ್ಲ. ಅಕ್ರಮ ವಸೂಲಿಗೆ ಪೊಲೀಸ್ ರಕ್ಷಣೆ ಒದಗಿಸುವ ಬದಲಿಗೆ ಜಿಲ್ಲಾಡಳಿತ ಟೋಲ್ಗೇಟ್ ಮುಚ್ಚಲು ಕ್ರಮ ಕೈಗೊಳ್ಳಬೇಕು ಎಂದು ಸುರತ್ಕಲ್ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಮೂರು ತಿಂಗಳ ತಾತ್ಕಾಲಿಕ ಅವಧಿಗೆ ಆರಂಭಗೊಂಡ ಸುರತ್ಕಲ್ ಟೋಲ್ಗೇಟ್ ಒಂಬತ್ತು ಕಿ.ಮೀ. ದೂರದ ಹೆಜಮಾಡಿ ಟೋಲ್ಗೇಟ್ ಕಾರ್ಯಾಚರಣೆ ಆರಂಭಿಸಿದ ನಂತರವೂ ಮುಂದುವರಿಯುತ್ತಿರುವುದು ಅಕ್ರಮವಾಗಿದೆ ಎಂದು ತಿಳಿಸಿದರು.
ಈ ಕುರಿತು ಜನಪರ ಸಂಘಟನೆಗಳು ಧ್ವನಿ ಎತ್ತಿದ ನಂತರ ಸುರತ್ಕಲ್ ಟೋಲ್ಗೇಟ್ನ್ನು ಹೆಜಮಾಡಿಯ ನವಯುಗ ಟೋಲ್ಗೇಟ್ನೊಂದಿಗೆ ವಿಲೀನ ಗೊಳಿಸಲು ಹೆದ್ದಾರಿ ಪ್ರಾಧಿಕಾರ ತೀರ್ಮಾನ ಕೈಗೊಂಡಿದೆ. ತನ್ನ ತೀರ್ಮಾನಕ್ಕೆ ರಾಜ್ಯ ಸರಕಾರದ ತಾತ್ವಿಕ ಒಪ್ಪಿಗೆಯನ್ನೂ ಪಡೆದಿದೆ. ಆದರೆ ತೀರ್ಮಾನವನ್ನು ವರ್ಷಗಳ ಕಾಲ ಜಾರಿಗೆ ತರದೆ ಅಕ್ರಮ ಟೋಲ್ ಸಂಗ್ರಹ ಮುಂದುವರಿಸಿದಾಗ ವರ್ಷದ ಹಿಂದೆ ಟೋಲ್ಗೇಟ್ ವಿರೋಧಿ ಹೋರಾಟ ಸಮಿತಿ ನೇತೃತ್ವದಲ್ಲಿ ತೀವ್ರ ರೀತಿಯ ಪ್ರತಿಭಟನೆಗಳನ್ನು ನಡೆಸಲಾಗಿತ್ತು ಎಂದು ವಿವರಿಸಿದರು.
ಜನಾಗ್ರಹ ವ್ಯಾಪಕಗೊಂಡ ನಂತರ ಮಂಗಳೂರಿಗೆ ಆಗಮಿಸಿದ ಕೇಂದ್ರ ಹೆದ್ದಾರಿ ಸಚಿವರ ಕಾರ್ಯದರ್ಶಿ ಮಂಗಳೂರಿನಲ್ಲಿ ಸಭೆ ನಡೆಸಿ ಹೆಜಮಾಡಿ ನವಯುಗ ಟೋಲ್ ಫ್ಲಾಝಾದಲ್ಲಿ ಸುರತ್ಕಲ್ ಟೋಲ್ಗೇಟ್ ವಿಲೀನಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಸುರತ್ಕಲ್ ಟೋಲ್ ಕೇಂದ್ರವನ್ನು ಬಂಟ್ವಾಳದ ಬ್ರಹ್ಮರ ಕೂಟ್ಲು ಟೋಲ್ ಕೇಂದ್ರದಲ್ಲಿ ವಿಲೀನಗೊಳಿಸಿ ಸುರತ್ಕಲ್ ಟೋಲ್ ಕೇಂದ್ರ ಮುಚ್ಚುಲಾಗುವುದು ಎಂದು ಸಂಸದ ನಳಿನ್ಕುಮಾರ್ ಕಟೀಲ್ ಸಮ್ಮುಖ ಹೇಳಿಕೆ ನೀಡಿದ್ದರು. ಆದರೆ ಆ ಪ್ರಸ್ತಾವ ಜಾರಿಗೆ ತರದೆ, ಹಳೆಯ ತೀರ್ಮಾನವನ್ನು ಮರೆತು ಈಗ ಪೊಲೀಸ್ ಬಲದೊಂದಿಗೆ ಸ್ಥಳೀಯರಿಂದ ಟೋಲ್ ಸಂಗ್ರಹಕ್ಕೆ ಮುಂದಾಗಿರುವುದು ಅಕ್ಷಮ್ಯ. ಇದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು ಎಂದು ಮುನೀರ್ ಕಾಟಿಪಳ್ಳ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ನಂತೂರು ಮುಕ್ಕ ಹೆದ್ದಾರಿ ಹಲವು ಸಮಸ್ಯೆಗಳಿಂದ ಬಳಲುತ್ತಿದೆ. ಸರ್ವಿಸ್ ರಸ್ತೆಗಳ ನಿರ್ಮಾಣ ಸ್ಥಗಿತಗೊಂಡಿದೆ. ಹೊಂಡಗಳನ್ನು ಮುಚ್ಚುವ, ರಸ್ತೆಗಳ ನಿರ್ವಹಣೆ ಕೆಲಸಗಳು ನಡೆಯುತ್ತಿಲ್ಲ. ಕೂಳೂರಿನ ಸೇತುವೆ ಯಾವುದೇ ಕ್ಷಣದಲ್ಲಿ ಬೀಳುವ ಅಪಾಯ ಎದುರಿಸುತ್ತಿದೆ. ಇಂತಹ ಗಂಭೀರವಾದ ರಸ್ತೆಯ ಸಮಸ್ಯೆಗಳನ್ನು ಬಗೆಹರಿಸದೆ ನಿಯಮಗಳಿಗೆ ವಿರುದ್ದವಾಗಿ ಒಂಬತ್ತು ಕಿ.ಮೀ. ಅಂತರದಲ್ಲಿ ಎರಡೆರಡು ಕಡೆ ಟೋಲ್ ಸಂಗ್ರಹ ನಡೆಸುವುದು ದರೋಡೆಗೆ ಸಮ ಎಂದು ಅವರು ತಿಳಿಸಿದರು.
ಈಗಿರುವ ಟೋಲ್ ಸಂಗ್ರಹದ ಗುತ್ತಿಗೆ ಇದೇ ಅಕ್ಟೋಬರ್ಗೆ ಕೊನೆಯಾಗುತ್ತದೆ. ಆ ನಂತರ ಯಾವ ಸಬೂಬು ನೀಡದೆ ನಿಯಮ ಪ್ರಕಾರ ಟೋಲ್ ಕೇಂದ್ರವನ್ನು ಮುಚ್ಚಬೇಕು. ಅಲ್ಲಿಯವರಗೆ ಯಾವುದೆ ಕಾರಣಕ್ಕೂ ಸ್ಥಳೀಯ ಖಾಸಗಿ ವಾಹನಗಳಿಗೆ ಶುಲ್ಕ ವಿಧಿಸದೆ ಯಥಾಸ್ಥಿತಿ ಕಾಪಾಡಬೇಕು ಎಂದು ಅವರು ಆಗ್ರಹಿಸಿದರು.
ಪೊಲೀಸ್ ಬಲದೊಂದಿಗೆ ಟೋಲ್ ಸಂಗ್ರಹಕ್ಕೆ ಮುಂದಾದರೆ ಸ್ಥಳೀಯ ಜನಪರ ಸಂಘಟನೆಗಳ ಜೊತೆ ತೀವ್ರ ಪ್ರತಿಭಟನೆಯನ್ನು ನಡೆಸಲಾಗುವುದು. ಅಲ್ಲದೆ, ಟೋಲ್ ಸಂಗ್ರವನ್ನು ತಡೆಯಲಾಗುವುದು ಎಂದು ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.