ಕೊಲ್ಲೂರು ಸಹಿತ ಮೂರು ದೇವಳಗಳಿಗೆ ಸಚಿವ ರೇವಣ್ಣ ಭೇಟಿ
ಕುಂದಾಪುರ, ಜು.14: ರಾಜ್ಯ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ರವಿವಾರ ಕೊಲ್ಲೂರು ಸೇರಿದಂತೆ ಕುಂದಾಪುರ ತಾಲೂಕಿನ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೆಳಗ್ಗೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಅವರು ಇತಿಹಾಸ ಪ್ರಸಿದ್ಧ ಕ್ಷೇತ್ರ ಹಟ್ಟಿಯಂಗಡಿಯ ಶ್ರೀಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಸಚಿವರನ್ನು ಆಡಳಿತ ಧರ್ಮದರ್ಶಿ ಬಾಲಚಂದ್ರ ಭಟ್ ಬರಮಾಡಿ ಕೊಂಡು ಕ್ಷೇತ್ರದ ಪ್ರಸಾದವನ್ನು ನೀಡಿ ಶಾಲು ಹೊದಿಸಿ ಗೌರವಿಸಿದರು.
ಬಳಿಕ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿದ ಸಚಿವ ರೇವಣ್ಣ, ಸರ್ವಾಲಂಕರ ಪೂಜೆ ಸಲ್ಲಿಸಿದರು. ರಾಜ್ಯ ಸರಕಾರದ ಕುರಿತು ಮಾಧ್ಯಮ ದವರೊಂದಿಗೆ ಮಾತನಾಡಲು ನಿರಾಕರಿಸಿದ ಅವರು, ನಾನು ದೇವರ ದರ್ಶನಕ್ಕೆ ಬಂದಿದ್ದು, ಇದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.
ಇದೇ ಸಂದರ್ಭದಲ್ಲಿ ಸಚಿವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ದರು. ಸರಕಾರ ಸ್ಥಿರವಾಗಿದ್ದು, ಆ ಬಗ್ಗೆ ಯಾವುದೇ ಆತಂಕ ಪಡಬೇಡಿ ಎಂದು ಕಾರ್ಯಕರ್ತರಿಗೆ ಅಭಯಹಸ್ತ ನೀಡಿದರೆಂದು ತಿಳಿದುಬಂದಿದೆ. ಮಧ್ಯಾಹ್ನದ ಪ್ರಸಾದ ಸ್ವೀಕರಿಸಿದ ಅವರು, ಅಲ್ಲಿಂದ ನೇರ ಕಟೀಲು ಕ್ಷೇತ್ರಕ್ಕೆ ತೆರಳಿದರು.
ಕೊಲ್ಲೂರು ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಎಚ್.ಹಾಲಪ್ಪ, ವ್ಯವಸ್ಥಾಪನ ಸಮಿತಿ ಸದಸ್ಯ ರಮೇಶ್ ಗಾಣಿಗ, ಜೆಡಿಎಸ್ ಮುಖಂಡ ರವಿ ಶೆಟ್ಟಿ ಬೈಂದೂರು ಉಪಸ್ಥಿತರಿದ್ದರು. ಯಾವುದೇ ದೇವಸ್ಥಾನಗಳಿಗೂ ಪೂರ್ವ ಮಾಹಿತಿ ನೀಡದೆ ಭೇಟಿ ನೀಡಿದ್ದ ಸಚಿವರಿಗೆ ಹೆಚ್ಚಿ ಪೊಲೀಸ್ ಭದ್ರತೆ ಕೂಡ ಇರಲಿಲ್ಲ.