ಚನ್ನಪಟ್ಟಣದ ವಿದ್ಯಾರ್ಥಿ ಮಲ್ಪೆಯಲ್ಲಿ ಸಮುದ್ರಪಾಲು
ಮಲ್ಪೆ, ಜು.14: ಮಲ್ಪೆ ಬೀಚ್ನಲ್ಲಿ ಆಡುತ್ತಿದ್ದ ವಿದ್ಯಾರ್ಥಿಯೋರ್ವ ನೀರಿನಲ್ಲಿ ಮುಳುಗಿ ಸಮುದ್ರ ಪಾಲಾಗಿರುವ ಘಟನೆ ಜು.13ರಂದು ಸಂಜೆ 6ಗಂಟೆ ಸುಮಾರಿಗೆ ನಡೆದಿದೆ.
ಸಮುದ್ರದಲ್ಲಿ ನಾಪತ್ತೆಯಾಗಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ನಿವಾಸಿ ದೀಪಕ್ (19) ಎಂಬವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಈ ವರೆಗೆ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇವರು ಬೆಂಗಳೂರಿನ ಐಟಿಐ ಕಾಲೇಜಿನ ವಿದ್ಯಾರ್ಥಿಯಾಗಿದ್ದಾನೆ.
ಒಂದೇ ಊರಿನ ಸುಮಾರು 13 ಮಂದಿ ಸ್ನೇಹಿತರು ಜು.13ರಂದು ಸಂಜೆ 4.45ರ ಸುಮಾರಿಗೆ ಪ್ರವಾಸಕ್ಕೆಂದು ಮಲ್ಪೆ ಬೀಚ್ಗೆ ಬಂದಿದ್ದರು. ನೀರಿನಲ್ಲಿ ಆಡುತ್ತಿದ್ದ ಇವರನ್ನು ಪೊಲೀಸರು ಎಚ್ಚರಿಕೆ ನೀಡಿ ಅಲ್ಲಿಂದ ಕಳುಹಿಸಿದ್ದರು. ಆದರೆ ಇವರು ಮತ್ತೆ 500 ಮೀಟರ್ ದೂರದಲ್ಲಿ ತಡೆಬೇಲಿ ಹಾಕದ ಹಾಗೂ ಯಾರು ಜನರಿಲ್ಲದ ಪ್ರದೇಶಕ್ಕೆ ತೆರಳಿ ನೀರಿನಲ್ಲಿ ಆಡುತ್ತಿದ್ದರೆನ್ನಲಾಗಿದೆ.
ಸಂಜೆ ಆರು ಗಂಟೆ ಸುಮಾರಿಗೆ ಸಮುದ್ರದಲ್ಲಿ ಆಡುತ್ತಿದ್ದ ದೀಪಕ್ ನೀರಿನ ಸೆಳೆತಕ್ಕೆ ಕೊಚ್ಚಿ ಹೋಗಿ ಸಮುದ್ರದಲ್ಲಿ ನಾಪತ್ತೆಯಾದರು. ದೀಪಕ್ ಕುಟುಂಬದವರು ಇಂದು ಮಲ್ಪೆಗೆ ಆಗಮಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.