ಮಂಗಳೂರು: ಹಜ್ ಕ್ಯಾಂಪ್ ಗೆ ಬಜ್ಪೆ ಅನ್ಸಾರ್ ಪಬ್ಲಿಕ್ ಸ್ಕೂಲ್ ನಲ್ಲಿ ಚಾಲನೆ
ಮಂಗಳೂರು: ಸರಕಾರದ ಹಜ್ ಸಮಿತಿ ವತಿಯಿಂದ ಪವಿತ್ರ ಹಜ್ ಗೆ ತೆರಳುವ ಹಜ್ಜಾಜ್ ಗಳ ಮಂಗಳೂರು ವಿಮಾನ ಕೇಂದ್ರದ ಯಾತ್ರೆಯು ಜುಲೈ 17 ರಿಂದ 19ರ ತನಕ ನಡೆಯಲಿದ್ದು, 17 ರಂದು ತೆರಳುವ ಯಾತ್ರಿಕರ ಅಧಿಕೃತ ವರದಿ ಮಾಡುವ ಮತ್ತು ಲಗ್ಗೇಜ್ ಹಾಕುವ ಪ್ರಕ್ರಿಯೆಯು ಸೋಮವಾರ ಬಜ್ಪೆ ಅನ್ಸಾರ್ ಪಬ್ಲಿಕ್ ಸ್ಕೂಲ್ ನಲ್ಲಿ ಆಯೋಜಿಸಲಾಗಿರುವ ಹಜ್ ಕ್ಯಾಂಪ್ ನಲ್ಲಿ ಪ್ರಾರಂಭಗೊಂಡಿತು.
ಜು.17ರಂದು 150 ಯಾತ್ರಿಕರ ತಂಡ ಮಂಗಳೂರು ವಿಮಾನ ನಿಲ್ದಾಣದ ಮೂಲಕ ಹೊರಡಲಿದ್ದು, ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷ ಯೇನಪೋಯ ಮಹಮ್ಮದ್ ಕುಂಞಿ ಅವರು ಪ್ರಥಮ ಹಜ್ ವರದಿ ಮತ್ತು ಲಗ್ಗೇಜ್ ಚೆಕ್ ಇನ್ ಮಾಡಲು ಆಗಮಿಸಿರುವ ಹಜ್ ಯಾತ್ರಿಕರಾದ ಬಂಟ್ವಾಳ ತಾಲೂಕಿನ ತುಂಬೆ ನಿವಾಸಿ, ಸಿಂಡಿಕೇಟ್ ಬ್ಯಾಂಕ್ ನ ನಿವೃತ್ತ ಪ್ರಬಂಧಕ ಮುಲ್ಕಿ ಹಮ್ಮಬ್ಬ ಮೊಯ್ದಿನಬ್ಬ ಅವರಿಗೆ ವರದಿ ಕಡತವನ್ನು ಹಸ್ತಾಂತರಿಸುವ ಮೂಲಕ ಕ್ಯಾಂಪ್ ಪ್ರಕ್ರಿಯೆಯನ್ನು ಉದ್ಘಾಟಿಸಿದರು.
ಮುಲ್ಕಿ ಹಮ್ಮಬ್ಬ ಮೊಯ್ದಿನಬ್ಬ ಜೊತೆಗೆ ಅವರ ಪತ್ನಿ ಸಾರಾ ಮೊಯ್ದಿನಬ್ಬ, ಪುತ್ರ ಎಂಜಿನಿಯರಿಂಗ್ ವೃತ್ತಿಯಲ್ಲಿರುವ ಆಶಿಕ್ ಮುಲ್ಕಿ ಹಜ್ ಗೆ ತೆರಳಲಿದ್ದಾರೆ.
ಹಜ್ ಯಾತ್ರಿಕರಾದ ಅಶ್ರಫ್ ಫೈಝಿ ಸುಂಕದಕಟ್ಟೆ ದುವಾ ಪ್ರಾರ್ಥನೆ ನೆರವೇರಿಸಿದರು. ಹಜ್ ಸಮಿತಿ ಸದಸ್ಯರಾದ ಕೆ.ಎಂ.ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಹಜ್ ಸಮಿತಿ ಬೆಂಗಳೂರು ಅಧಿಕಾರಿ ಫೈರೋಝ್, ಹಜ್ ನಿರ್ವಹಣಾ ಸಮಿತಿಯ ಉಪಾಧ್ಯಕ್ಷ ಸಿ. ಮಹಮೂದ್ ಹಾಜಿ, ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ ಕೃಷ್ಣಾಪುರ, ಕೋಶಾಧಿಕಾರಿ ಹನೀಫ್ ಹಾಜಿ ಬಂದರ್, ಜೊತೆ ಕಾರ್ಯದರ್ಶಿ ರಫೀಕ್ ಹಾಜಿ ಕೊಡಾಜೆ, ಮಾಧ್ಯಮ ಕಾರ್ಯದರ್ಶಿ ರಶೀದ್ ವಿಟ್ಲ, ಮಹಮೂದ್ ಹಾಜಿ, ಸಿ.ಎಚ್. ಉಳ್ಳಾಲ್, ಎ.ಬಿ.ಬಜಾಲ್, ಹನೀಫ್ ಹಿಲ್ ಟಾಪ್, ಸಲೀಲ್ ಬಜ್ಪೆ, ನಿವೃತ್ತ ಪೊಲೀಸ್ ಅಧಿಕಾರಿ ಮಹಮ್ಮದ್ ಹಾಜಿ, ಫಝಲ್ ಹಾಜಿ, ಅಬ್ದುರ್ರಶೀದ್ ಜೆಪ್ಪು, ಶಫೀವುಲ್ಲಾ ಕಡಬ, ಶರೀಫ್ ಪ್ರಿನ್ಸ್, ಸುಹೈಲ್ ಕಂದಕ್, ಹಾರಿಸ್ ಕಾನತ್ತಡ್ಕ, ಅಬ್ದುಲ್ ಖಾದರ್ ಏರ್ ಪೋರ್ಟ್, ಹಮೀದ್ ಜರಿ, ಇಬ್ರಾಹಿಂ ಕೊಣಾಜೆ, ರಿಯಾಝ್ ಬಂದರ್, ಖಾದಿಮುಲ್ ಹುಜ್ಜಾಜ್ ಸಿಆರ್ ಪಿಎಫ್ ಸಿಬ್ಬಂದಿ ಖಾಸಿಂ ಆತೂರು ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭ ಹೆಲ್ತ್ ಮಾರ್ಟ್ ಮೆಡಿಕಲ್ಸ್ ನ ಪ್ರಾಯೋಜಕತ್ವದಲ್ಲಿ ಯಾತ್ರಿಕರಿಗೆ ಉಚಿತ ಔಷಧಿ ಕಿಟ್ ವಿತರಿಸಲಾಯಿತು.
ಜು.17 ರಿಂದ 19ರ ತನಕ 5 ವಿಮಾನಗಳಲ್ಲಿ 750 ಯಾತ್ರಿಕರು ಮಂಗಳೂರು ಮೂಲಕ ಮದೀನಾಕ್ಕೆ ಯಾತ್ರೆ ಹೊರಡಲಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ ಯಾತ್ರಿಕರು ಮಂಗಳೂರು ಹಜ್ ಕ್ಯಾಂಪ್ ಮೂಲಕ ಯಾತ್ರೆ ಕೈಗೊಳ್ಳುವರು.