ಕೂಳೂರು ಸೇತುವೆಯಿಂದ ಜಿಗಿದ ವ್ಯಕ್ತಿಯ ಮೃತದೇಹ ಪತ್ತೆ
ಮಂಗಳೂರು, ಜು.15: ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂದರ್ ಠಾಣೆಗೆ ಕರೆತರುವಾಗ ಕೂಳೂರು ಸೇತುವೆಯಿಂದ ಆರೋಪಿ ಜಿಗಿದ ಘಟನೆ ರವಿವಾರ ತಡರಾತ್ರಿ ನಡೆದಿದ್ದು, ವ್ಯಕ್ತಿಯ ಮೃತದೇಹ ಬೆಂಗ್ರೆ ಸಮೀಪ ಸೋಮವಾರ ಸಂಜೆ ಪತ್ತೆಯಾಗಿದೆ.
ಕುದ್ರೋಳಿ ನಿವಾಸಿ ಮುನೀರ್ (42) ಮೃತರು ಎಂದು ಗುರುತಿಸಲಾಗಿದೆ.
ಘಟನೆ ವಿವರ: ಮುನೀರ್ ತನ್ನ ಪತ್ನಿಗೆ ಹಲ್ಲೆ ನಡೆಸಿದ್ದು, ಬಳಿಕ ತನ್ನ ಲಗೇಜ್ ಸಹಿತ ಮಂಗಳೂರು ತೊರೆಯಲು ಯತ್ನಿಸಿದ್ದರೆನ್ನಲಾಗಿದ್ದು, ಅವರ ವಿರುದ್ಧ ಮುಹಮ್ಮದ್ ಎಂಬವರು ಮಂಗಳೂರು ಉತ್ತರ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಪೊಲೀಸ್ ಠಾಣೆಗಳಿಗೂ ಮಾಹಿತಿ ನೀಡಿದ್ದರು. ಆರೋಪಿ ಆಟೊರಿಕ್ಷಾವೊಂದರಲ್ಲಿ ಹಳೆಯಂಗಡಿ ಸಮೀಪ ಹೋಗುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದರು.
ಬಳಿಕ ಆರೋಪಿ ಮುನೀರ್ ನನ್ನು ಅದೇ ಆಟೊದಲ್ಲಿ ಮಂಗಳೂರಿನ ಬಂದರ್ ಠಾಣೆಗೆ ಕರೆತರುವಾಗ ಕೂಳೂರು ಸೇತುವೆ ಬಳಿ ‘ಮೂತ್ರ ಬರುತ್ತಿದೆ ಕೆಳಗಿಳಿಯಬೇಕು’ ಎಂದು ಹೇಳಿ ಆಟೊದಿಂದ ಕೆಳಗಿಳಿದ ತಕ್ಷಣವೇ ಆರೋಪಿ ಸೇತುವೆಯಿಂದ ಹಾರಿರುವುದಾಗಿ ಪೊಲೀಸರು ತಿಳಿಸಿದ್ದು, ಸೋಮವಾರ ಸಂಜೆ ಬೆಂಗ್ರೆ ಸಮೀಪ ಮುನೀರ್ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ದೂರು ದಾಖಲಾಗಿದೆ.