ಉಡುಪಿ ಜಿಲ್ಲೆಯ ನಾಲ್ವರಿಗೆ ಕಸಾಪ ದತ್ತಿ ಪ್ರಶಸ್ತಿ ಪ್ರದಾನ
ಉಡುಪಿ, ಜು.15: ಕನ್ನಡ ಸಾಹಿತ್ಯ ಪರಿಷತ್ ನೀಡುವ ವಿವಿಧ ದತ್ತಿ ನಿಧಿ ಪ್ರಶಸ್ತಿಗಳನ್ನು ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಇತ್ತೀಚೆಗೆ ಪ್ರದಾನ ಮಾಡಲಾಯಿತು.
ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮನು ಬಳಿಗಾರ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕಿ ಕೆ.ಎಂ.ಜಾನಕಿ ಪ್ರಶಸ್ತಿ ಪ್ರದಾನ ಮಾಡಿದರು.
ಉಡುಪಿ ಜಿಲ್ಲೆಯ ನಾಲ್ಕು ಲೇಖಕರು ಈ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್ ಅವರ ‘ಕೀಳರಿಮೆಯನ್ನು ಮೆಟ್ಟಿ ನಿಲ್ಲುವುದು ಹೇಗೆ?’ ಎಂಬ ಕೃತಿಗೆ ದಿ.ಡಾ.ಎ.ಎಸ್. ಧರಣೇಂದ್ರಯ್ಯ ಮನೋ ವಿಜ್ಞಾನ ದತ್ತಿ ಪ್ರಶಸ್ತಿ, ಹಿರಿಯಡ್ಕ ಸರಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ರಾದ ಡಾ.ನಿಕೇತನ ಅವರ ‘ಬೊಗಸೆಯಲ್ಲಿ ಸಾಗರ’ ಕೃತಿಗೆ ಅಂತಾರಾಷ್ಟ್ರೀಯ ಮಹಿಳಾ ವರ್ಷದ ಮಹಿಳಾ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇನ್ನು ಗಂಗಾಧರ ಐತಾಳ್ ಅವರ ‘ಮಕ್ಕಳಿಗಾಗಿ ಖಗೋಳ ವಿಜ್ಞಾನ’ ಕೃತಿಗೆ ಜಿ.ಪಿ.ರಾಜಾರತ್ನಂ ಸಂಸ್ಮರಣಾ ದತ್ತಿ ಪ್ರಶಸ್ತಿ ಹಾಗೂ ಕಿರಿಯ ಲೇಖಕ ಅಂಶು ಸಂಹಿತ್ ಅವರ ‘ಕ್ಯಾಂಡಲ್ಡಾಲ್’ ಕೃತಿಗೆ ಸಿಸು ಸಂಗಮೇಶ್ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.