‘ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರ ಮಹಿಳೆ’
ಉಡುಪಿ, ಜು.15: ಕ್ರಿ.ಶ.15ನೇ ಶತಮಾನದಲ್ಲಿ ಪೋರ್ಚುಗೀಸರು ಭಾರತದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು. ದಕ್ಷಿಣ ಕನ್ನಡದ ಸಾಂಬಾರು ಪದಾರ್ಥಗಳನ್ನು ಅವರು ಖರೀದಿಸಿ ಯುರೋಪಿಗೆ ಮಾರುತ್ತಿದ್ದರು. ವ್ಯವಹಾರ ನಿಮಿತ್ತ ದಕ್ಷಿಣಕನ್ನಡಿಗರ ಮೇಲೆ ಪೋರ್ಚುಗೀಸರು ದಬ್ಬಾಳಿಕೆಯನ್ನೂ ನಡೆಸುತ್ತಿದ್ದರು. ಇದನ್ನು ಸಹಿಸದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ಧ ಸಿಡಿದೆದ್ದಳು ಎಂದು ಮಂಗಳೂರಿನ ರಾಣಿ ಅಬ್ಬಕ್ಕ ಸಂಶೋಧನಾ ಕೇಂದ್ರದ ನಿರ್ದೇಶಕ ಪ್ರೊ. ತುಕಾರಾಮ ಪೂಜಾರಿ ಹೇಳಿದ್ದಾರೆ.
ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಇತಿಹಾಸ ವಿಭಾಗವು ಆಯೋಜಿಸಿದ್ದ ‘ಪ್ರಥಮ ಸ್ವಾತಂತ್ರ ಹೋರಾಟಗಾರ್ತಿ ರಾಣಿ ಅಬ್ಬಕ್ಕ’ ಎಂಬ ವಿಷಯದ ಮೇಲೆ ಅವರು ವಿಶೇಷ ಉಪನ್ಯಾಸ ನೀಡಿ ಮಾತನಾಡುತಿದ್ದರು.
15ನೇ ಶತಮಾನದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿ ಗಳನ್ನು ವಿವರಿಸಿದ ಅವರು, ಪೋರ್ಚುಗೀಸರ ಪತನಕ್ಕೆ ಅಬ್ಬಕ್ಕ ಹೆಣೆದ ತಂತ್ರಗಾರಿಕೆಗಳನ್ನೂ ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಘೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು.
ಇತಿಹಾಸ ವಿಭಾಗ ಮುಖ್ಯಸ್ಥ ಚಂದ್ರಕಾಂತ ಭಟ್ ಸ್ವಾಗತಿಸಿದರು. ವಿದ್ಯಾರ್ಥಿ ಸುದರ್ಶನ್ ವಂದಿಸಿದರು. ಪವಿತ್ರಾ ಕಾರ್ಯಕ್ರಮ ನಿರೂಪಿಸಿದರು.