ಎ.ಜಿ.ಕೊಡ್ಗಿ -ಬ್ರಹ್ಮಭಟ್ಗೆ ರಾಷ್ಟ್ರೀಯ ಸೂರ್ಯಮಿತ್ರ ಪ್ರಶಸ್ತಿ ಪ್ರದಾನ
ಉಡುಪಿ, ಜು.16: ಅಮಾಸೆಬೈಲಿನ ಎ.ಜಿ.ಕೊಡ್ಗಿ ಮತ್ತು ಅಹ್ಮದಾಬಾದ್ನ ಮಹಿಳಾ ಹೌಸಿಂಗ್ ಸೇವಾ ಟ್ರಸ್ಟ್ನ ಬಿಜಲ್ ಬ್ರಹ್ಮ ಭಟ್ ಅವರಿಗೆ ಸೆಲ್ಕೋ ಸಂಸ್ಥೆಯ 2018-19ನೆ ಸಾಲಿನ ರಾಷ್ಟ್ರೀಯ ‘ಸೂರ್ಯಮಿತ್ರ’ ಪ್ರಶಸ್ತಿಯನ್ನು ಮೈಸೂರಿನ ಹೋಟೆಲ್ ಗ್ರ್ಯಾಂಡ್ ಮೌರ್ಯದಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.
ಕೃಷಿಕ, ರಾಜಕೀಯ ಮುತ್ಸದ್ದಿ ಎ.ಜಿ.ಕೊಡ್ಗಿ ಅಮಾಸೆಬೈಲು ಗ್ರಾಮದ ಸಮಗ್ರ ಅಭಿವೃದ್ಧಿಯ ಉದ್ಧೇಶದಿಂದ 2008ರಲ್ಲಿ ಅಮಾಸೆಬೈಲು ಚಾರಿಟೇಬಲ್ ಟ್ರಸ್ಟ್ ಮೂಲಕ ಅಮಾಸೆಬೈಲ್ನ್ನು ದೇಶದ ಮೊದಲ ಸಂಪೂರ್ಣ ಸೋಲಾರ್ ಗ್ರಾಮವನ್ನಾಗಿ ಮಾಡಿ, ಇಂಧನ ಸ್ವಾವಲಂಬನೆಗೆ ಒಂದು ಮಾದರಿಯನ್ನು ರೂಪಿಸಿದ್ದಾರೆ.
ಬಿಜಲ್ ಬ್ರಹ್ಮ ಭಟ್ ಸಮುದಾಯ ಅಭಿವೃದ್ಧಿ ಕ್ಷೇತ್ರದಲ್ಲಿ ಮುಖ್ಯವಾಗಿ ನಗರ ಪ್ರದೇಶಗಳ ಕೊಳಗೇರಿಗಳಲ್ಲಿ ಒಂದು ಕೈಗೆಟಕುವ ವೆಚ್ಚದಲ್ಲಿ ಮನೆ ನಿರ್ಮಾಣ, ಬೆಳಕಿನ ವ್ಯವಸ್ಥೆಯ ಮಾದರಿಗಳು, ಸೋಲಾರ್ ಪ್ಯಾನ್ಗಳು ಹಾಗೂ ಮಹಿಳಾ ಸಬಲೀಕರಣ, ಉದ್ಯಮಶೀಲತೆಯ ತರಬೇತಿ, ನೀರು ಮತ್ತು ಸ್ವಚ್ಛತೆ ಇಂಥಹ ಅತೀ ಮೂಲಭೂತ ಅವಶ್ಯಕತೆಗಳಿಗೆ ಪರಿಹಾರವನ್ನು ನೀಡಿದ್ದಾರೆ.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಡಾ.ಹರೀಶ್ ಹಂದೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್, ಸೆಲ್ಕೋ ಸಂಸ್ಥೆಯ ನಿರ್ದೇಶಕ ಥೋಮಸ್ ಪುಲೇನ್ಕವ್, ಟ್ರಸ್ಟೀ ಶ್ರೀನಿವಾಸ್, ಸಿ.ಇ.ಒ ಮೋಹನ್ ಭಾಸ್ಕರ್ ಹೆಗಡೆ, ಮಹಾಪ್ರಬಂಕ ಜಗದೀಶ್ ಪೈ ಉಪಸ್ಥಿತರಿದ್ದರು.