ಪುತ್ತೂರು: ನವ ವಿವಾಹಿತೆಯನ್ನು ಚೂರಿಯಿಂದ ಇರಿದು ಕೊಲೆ; ಆರೋಪಿ ಪತಿಯ ಬಂಧನ
ಅಕ್ಷತಾ, ಗಣೇಶ್
ಪುತ್ತೂರು: ಪತಿಯೊಬ್ಬ ಪತ್ನಿಯನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಪುತ್ತೂರು ತಾಲೂಕಿನ ಪಾಣಾಜೆ ಗ್ರಾಮದ ಆರ್ಲಪದವು ಸಮೀಪದ ಕಲ್ಲಪದವು ಎಂಬಲ್ಲಿ ಗುರುವಾರ ತಡ ರಾತ್ರಿ ನಡೆದಿದೆ.
ಇಲ್ಲಿನ ನಿವಾಸಿ ಬಾಬು ಎಂಬವರ ಪುತ್ರ ಗಣೇಶ್(29) ಕೊಲೆ ಮಾಡಿರುವ ಆರೋಪಿ. ಆತನ ಪತ್ನಿ ಅಕ್ಷತಾ (22) ಗಂಡನ ಕೃತ್ಯಕ್ಕೆ ಬಲಿಯಾದವರು.
ಕಳೆದ 1 ವರ್ಷದ ಹಿಂದಷ್ಟೇ ನಿಡ್ಪಳ್ಳಿ ಗ್ರಾಮದ ಡೊಂಬಟೆಬರಿ ನಿವಾಸಿ ರಮೇಶ ಮತ್ತು ಕಮಲ ದಂಪತಿಯ ಪುತ್ರಿಯಾದ ಅಕ್ಷತಾ ಅವರನ್ನು ಗಣೇಶನಿಗೆ ವಿವಾಹ ಮಾಡಿ ಕೊಡಲಾಗಿತ್ತು. ವಿವಾಹದ ಬಳಿಕ ದಂಪತಿ ಮನೆಯ ಪಕ್ಕದ ಕೊಟ್ಟಿಗೆಯಲ್ಲಿ ಪ್ರತ್ಯೇಕವಾಗಿ ಅಡಿಗೆ ಮಾಡಿಕೊಂಡು ವಾಸ್ತವ್ಯವಿದ್ದರು. ಗುರುವಾರ ರಾತ್ರಿ ವೇಳೆ ಗಣೇಶ್ ಸರಿಯಾಗಿ ಅಡುಗೆ ಮಾಡಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ ಕಾಯ್ದು ಅಕ್ಷತಾ ಅವರ ಕುತ್ತಿಗೆ, ಕೈ ಮತ್ತು ಎದೆಯ ಭಾಗಕ್ಕೆ ಚೂರಿಯಿಂದ ಇರಿದು ಗಂಭೀರವಾಗಿ ಹಲ್ಲೆ ನಡೆಸಿದ್ದು, ಗಾಯಾಳು ಅಕ್ಷತಾ ಅವರನ್ನು ಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದ್ದರೂ, ಆ ವೇಳೆಗಾಗಲೇ ಅವರು ಮೃತಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರ ತಾಯಿ ಕಮಲ ಅವರು ಸಂಪ್ಯ ಠಾಣೆಗೆ ದೂರು ನೀಡಿದ್ದಾರೆ.
ಅಕ್ಷತಾ ಅವರು ನವ ವಿವಾಹಿತೆಯಾಗಿದ್ದ ಹಿನ್ನಲೆಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಮಂಗಳೂರಿನ ದೇರಳಕಟ್ಟೆ ಆಸ್ಪತ್ರೆಯಲ್ಲಿ ನಡೆಸಲಾಗಿದೆ. ಗ್ರಾಮಾಂತರ ಪೊಲೀಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಸಂಪ್ಯ ಪೊಲೀಸ್ ಠಾಣೆಯ ಎಸ್.ಐ ಸಕ್ತಿವೇಲು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಆರೋಪಿಯ ಬಂಧನ
ಪತ್ನಿಗೆ ಚೂರಿಯಿಂದ ಇರಿದು ಬಳಿಕ ಸ್ಥಳದಿಂದ ಪರಾರಿಯಾಗಿದ್ದ ಆರೋಪಿ ಗಣೇಶ್ ಆರ್ಲಪದವಿನಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿಯೊಂದರಲ್ಲಿ ಮಲಗಿದ್ದ. ಲಾರಿಯಲ್ಲಿ ಮಲಗಿದ್ದ ಆರೋಪಿಯನ್ನು ಶುಕ್ರವಾರ ಮುಂಜಾನೆ ವೇಳೆ ಸಂಪ್ಯ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.