ನಿರ್ಮಲಾ ಶಾಲೆ ಮಕ್ಕಳಿಂದ ‘ಕೃಷಿ ನಡೆ ನಮ್ಮ ನಡೆ’ ಕಾರ್ಯಕ್ರಮ
ಬ್ರಹ್ಮಾವರ, ಜು.19: ಉಡುಪಿಯ ಭಾರತ ಸ್ಕೌಟ್ ಮತ್ತು ಗೈಡ್ಸ್ನ ಸಹಕಾರ ದೊಂದಿಗೆ ಬ್ರಹ್ಮಾವರ ವಲಯದ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗಾಗಿ ‘ಕೃಷಿಯ ಕಡೆ ನಮ್ಮ ನಡೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಇದರಲ್ಲಿ ವಿದ್ಯಾರ್ಥಿಗಳಿಗೆ ಗದ್ದೆಯಲ್ಲಿ ಉಳುಮೆ ಮಾಡುವುದು, ನೇಜಿ ನೆಡುವ ಬಗ್ಗೆ ತಿಳಿಸಿ ಹೇಳಲಾಯಿತು. ಇದರಲ್ಲಿ ಬ್ರಹ್ಮಾವರ ನಿರ್ಮಲಾ ಆಂಗ್ಲ ಮಾಧ್ಯಮ ಶಾಲೆಯ 7 ಮಂದಿ ಸ್ಕೌಟ್ಸ್ ಮತ್ತು 6 ಮಂದಿ ಗೈಡ್ಸ್ ವಿದ್ಯಾರ್ಥಿ ಗಳು ಶಿಕ್ಷಕಿ ರಮ ಎಂ. ಹಾಗೂ ಕಬ್ಸ್ ಶಿಕ್ಷಕಿ ಅನುರಾಧ ಇವರ ನೇತೃತ್ವದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಇದರಿಂದ ಹೊಸ ಹೊಸ ಅನುಭವಗಳನ್ನು ಪಡೆದರು. ಗದ್ದೆಯ ಮಾಲಕರಾದ ತಮ್ಮಯ್ಯ ಪೂಜಾರಿ ಅವರು ವಿದ್ಯಾರ್ಥಿಗಳಿಗೆ ಬೇಸಾಯದ ಕುರಿತು ಪ್ರಾಥಮಿಕ ಮಾಹಿತಿಗಳನ್ನು ನೀಡಿದರು. ಪ್ರತಿಯೊಬ್ಬ ವಿದ್ಯಾರ್ಥಿ ಸ್ವತಃ ಗದ್ದೆಗೆ ಇಳಿದು ನೇಜಿ ನೆಟ್ಟು ಸಂಭ್ರಮಿಸಿದರು.
ಸ್ಥಳೀಯ ಕಾರ್ಯದರ್ಶಿ ಆರ್.ಟಿ.ಭಟ್ ಮಾತನಾಡಿ ಕೃಷಿಯ ಕುರಿತು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿಯನ್ನು ತೋರಿಸಬೇಕೆಂದು ಕಿವಿಮಾತು ಹೇಳಿದರು. ಪರಿಸರದ ಹಲವು ಶಾಲೆಗಳ ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಕ, ಶಿಕ್ಷಕಿಯರು,ವಿದ್ಯಾರ್ಥಿಗಳು ಭಾಗವಹಿಸಿದ್ದರು.