ಭಾರೀ ಮಳೆ: ಹೆಜಮಾಡಿ ಶಾಲೆ, ಉಳಿಯರಗೋಳಿ ಮನೆಗೆ ಭಾಗಶಃ ಹಾನಿ
ಕಾಪು: ಕಾಪು ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ಹೆಜಮಾಡಿಯ ಶಾಲೆ ಹಾಗೂ ಕಾಪು ಪುರಸಭಾ ವ್ಯಾಪ್ತಿಯ ಉಳಿಯರಗೋಳಿಯ ವಾಸದ ಮನೆಗೆ ಭಾಗಶಃ ಹಾನಿಯಾಗಿದೆ.
ಹೆಜಮಾಡಿಯ ಜಿಲ್ಲಾ ಪಂಚಾಯಿತಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮಾಡಿಗೆ ನಿನ್ನೆ ರಾತ್ರಿ ಸುರಿದ ಮಳೆಯಿಂದಾಗಿ ಶಾಲೆ ಸಮೀಪದ ಪಟ್ಟಾ ಸ್ಥಳದ ಹೆರಿಬೋಗಿ ಮರದ ರೆಂಬೆಯೊಂದು ಬಿದ್ದು ಸುಮಾರು 25000 ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.
ಇಂದು ಬೆಳಿಗ್ಗೆ ಹೆಜಮಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧಾಕರ ಕರ್ಕೇರ ಸ್ಥಳಕ್ಕೆ ತೆರಳಿ ದುರಸ್ತಿ ಕಾರ್ಯ ನಡೆಸಿದ್ದಾರೆ.
ಶಾಲೆಯ ತರಗತಿ ಕೊಠಡಿಯನ್ನು ತೆರವುಗೊಳಿಸಿ ಬೇರೆ ಕೊಠಡಿಯಲ್ಲಿ ಮಕ್ಕಳನ್ನು ಕುಳ್ಳಿರಿಸಿ ತರಗತಿಯನ್ನು ಮುಂದುವರಿಸಲಾಗಿತ್ತು. ಸ್ಥಳಕ್ಕೆ ಹೆಜಮಾಡಿ ಪಂಚಾಯತ್ ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಪಿಡಿಒ ಮಮತಾ ಶೆಟ್ಟಿ, ವಿಎ ಅರುಣ್ ಕುಮಾರ್ ಮತ್ತಿತರರು ಭೇಟಿಯಿತ್ತಿದ್ದಾರೆ.
ಗ್ರಾಮ ಕರಣಿಕ ಅರುಣ ಕುಮಾರ್ ನಷ್ಟವನ್ನು ಅಂದಾಜಿಸಿದ್ದು, ಕಾಪು ತಹಶೀಲ್ದಾರ್ ಕಚೇರಿಗೆ ಮಾಹಿತಿಯನ್ನು ರವಾನಿಸಿದ್ದಾರೆ.
ಕಾಪು: ಕಾಪು ಪುರಸಭೆ ವ್ಯಾಪ್ತಿಯ ಉಳಿಯಾರಗೋಳಿ ಭಾರತ್ ನಗರ ಪಾಪಮ್ಮಎಂಬವರ ಮನೆಯ ಗೋಡೆ ಕುಸಿತ, ಮನೆಗೆ ಸಂಪೂರ್ಣ ಹಾನಿಯಾಗಿದೆ.
ಪಾಪಮ್ಮ, ಮಕ್ಕಳಾದ ಸುಬ್ರಹ್ಮಣ್ಯ ಮತ್ತು ಹರೀಷ್ ಮಲಗಿದ್ದ ವೇಳೆ ಘಟನೆ ಸಂಭವಿಸಿದೆ. ಮನೆಯಲ್ಲಿ ಮಲಗಿದವರು ಢಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಕಾಪು ಗ್ರಾಮ ಕರಣಿಕ, ಪುರಸಭಾ ಸದಸ್ಯೆ ಗುಲಾಬಿ ಪಾಲನ್ ಅವರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 50ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.