ಪಡುಬಿದ್ರಿ ರೋಟರಿ ಕ್ಲಬ್ ಪದಗ್ರಹಣ
ಪಡುಬಿದ್ರಿ: ಮಣಿಪಾಲದಲ್ಲಿ ರೋಟರಿ ಸಂಸ್ಥೆಯ ವತಿಯಿಂದ ಸ್ಕಿನ್ ಬ್ಯಾಂಕ್ ಸ್ಥಾಪನೆ ಸನ್ನಿಹಿತವಾಗಿದೆ ಎಂದು ರೋಟರಿ ಜಿಲ್ಲೆ 3182ರ ಮಾಜಿ ಜಿಲ್ಲಾ ಗವರ್ನರ್ ಅಭಿನಂದನ್ ಎ.ಶೆಟ್ಟಿ ಹೇಳಿದರು. ಪಡುಬಿದ್ರಿ ರೋಟರಿ ಕ್ಲಬ್ನ 2019-20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಪದಗ್ರಹಣ ಅಧಿಕಾರಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಈವರೆಗೆ ಭಾರತದಲ್ಲಿ ಮುಂಬಯಿ ಮತ್ತು ಚೆನ್ನೈನಲ್ಲಿ ಮಾತ್ರ ಸ್ಕಿನ್ ಬ್ಯಾಂಕ್ ಕಾರ್ಯಾಚರಿಸುತ್ತಿತ್ತು. ಮಣಿಪಾಲದಲ್ಲಿ ಸ್ಕಿನ್ ಬ್ಯಾಂಕ್ ಸ್ಥಾಪನೆಯಿಂದ ಈ ಭಾಗದ ಸುಟ್ಟ ಗಾಯ, ಅಪಘಾತಗಳ ಸಂದರ್ಭ ಶೀಘ್ರ ಸ್ಕಿನ್ ಡ್ರಾಫ್ಟಿಂಗ್ ಸಾಧ್ಯವಿದೆ. ಇಂತಹ ಮಾನವೀಯ ಸೇವೆಗಳನ್ನು ರೋಟರಿ ಕ್ಲಬ್ ವಿಶ್ವದಾದ್ಯಂತ ನಡೆಸುತ್ತಿದೆ. ಮಾನವೀಯತೆ ಹಾಗೂ ಸೌಹಾರ್ದತೆಯಿಂದ ನಾವು ಜೀವನ ನಡೆಸುವುದರಿಂದ ಉತ್ತಮರಾಗಲು ಸಾಧ್ಯವಿದೆ ಎಂದು ಅಭಿನಂದನ್ ಎ.ಶೆಟ್ಟಿ ಹೇಳಿದರು.
ಮಾನವೀಯತೆ ಹಾಗೂ ಸೌಹಾರ್ದತೆಯಿಂದ ನಾವು ಜೀವನ ನಡೆಸುವುದರಿಂದ ಉತ್ತಮ ಮನುಷ್ಯರಾಗಿ ಬಾಳಲು ಸಾಧ್ಯವಿದೆ
ನೂತನ ಅಧ್ಯಕ್ಷ ರಿಯಾಝ್ ಮುದರಂಗಡಿ ಮಾತನಾಡಿ, ಸರ್ವ ಸದಸ್ಯರ ಸಹಕಾರದೊಂದಿಗೆ ಮುಂದಿನ ಒಂದು ವರ್ಷ ಕಾಲ ಸಮಾಜಮುಖಿ ಸೇವೆ ನೀಡಲು ಸಿದ್ಧ. ಸಮಾಜಕ್ಕೆ ನಾವು ನೀಡುವ ಕೊಡುಗೆಯೇ ಜೀವನದ ಅಮೂಲ್ಯ ಸಂಪತ್ತು ಎಂದರು.
ದಿ.ವೈ.ಹಿರಿಯಣ್ಣ-ಮೀರಾಬಾಯಿ ದಂಪತಿಯ ಸ್ಮರಣಾರ್ಥ ಅವರು ಮಕ್ಕಳ ವತಿಯಿಂದ ಕೊಡಮಾಡಿದ ಆಸುಪಾಸಿನ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಪಲಿತಾಂಶ ಪಡೆದ ಸಾಗರ್ ವಿದ್ಯಾ ಮಂದಿರ ಶಾಲೆಗೆ ದಿ.ವೈ.ಹಿರಿಯಣ್ಣ-ಮೀರಾಬಾಯಿ ದಂಪತಿಯ ಸ್ಮರಣಾರ್ಥ ಪರ್ಯಾಯ ಫಲಕ ವಿತರಿಸಲಾಯಿತು.
ಆರ್ಥಿಕ ಹಿಂದುಳಿದ ಹೆಜಮಾಡಿಯ ಗುಲಾಬಿ ದೇವಾಡಿಗರಿಗೆ ರೋಟರಿ ಝೋನಲ್ ಲೆಫ್ಟಿನೆಂಟ್ ರಮೀಝ್ ಹುಸೈನ್ ಆರ್ಥಿಕ ಸಹಾಯಧನದ ಕೂಪನ್ ವಿತರಿಸಿದರು.
ರೋಟರಿ ಗೃಹ ಪತ್ರಿಕೆ ಸ್ಪಂದನವನ್ನು ರೋಟರಿ ಅಸಿಸ್ಟೆಂಟ್ ಗವರ್ನರ್ ವೈ.ಗಣೇಶ್ ಆಚಾರ್ಯ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ನಿರ್ಗಮನ ಅಧ್ಯಕ್ಷ ಗಣೇಶ್ ಆಚಾರ್ಯ ಸ್ವಾಗತಿಸಿದರು. ನಿರ್ಗಮನ ಕಾರ್ಯದರ್ಶಿ ಸುಧಾಕರ ಕೆ.ವರದಿ ಮಂಡಿಸಿದರು. ಬಿಎಸ್ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಸಂತೋಷ್ ಪಡುಬಿದ್ರಿ ವಂದಿಸಿದರು.