ಪುಸ್ತಕಗಳ ಬಗ್ಗೆ ಉದಾಸೀನ ಮನೋಭಾವ ಬೇಡ: ಪಾರ್ವತಿ ಐತಾಳ್
ಕುಂದಾಪುರ, ಜು.22: ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿ ಕೊಳ್ಳಬೇಕು. ಪುಸ್ತಕದಿಂದ ಸಿಗುವ ಜ್ಞಾನ ಬೇರೆ ಎಲ್ಲಿಯೂ ಸಿಗುವುದಿಲ್ಲ. ಆದ್ದರಿಂದ ಪುಸ್ತಕಗಳ ಬಗ್ಗೆ ಇರುವ ಉದಾಸೀನ ಮನೋಭಾವ ಹೋಗಬೇಕು ಎಂದು ಸಾಹಿತಿ ಪಾರ್ವತಿ ಜಿ.ಐತಾಳ್ ಹೇಳಿದ್ದಾರೆ.
ನವದೆಹಲಿಯ ನೀತಿ ಆಯೋಗದ ಸೂಚನೆಯಂತೆ ಸಾರ್ವಜನಿಕರಲ್ಲಿ ಓದುವ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಓದುಗ ತಿಂಗಳು ಕಾರ್ಯಕ್ರಮದ ಪ್ರಯುಕ್ತ ಉಡುಪಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಕುಂದಾಪುರ ಶಾಖಾ ಗ್ರಂಥಾಲಯ ದಲ್ಲಿ ಶನಿವಾರ ಏರ್ಪಡಿಸಲಾದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನಿಗದಿತ ಅಧ್ಯಯನದಿಂದ ಮಾತ್ರ ನಮ್ಮ ವ್ಯಕ್ತಿತ್ವದ ವಿಕಸನ ಮತ್ತು ಪರಿವರ್ತನೆ ಸಾಧ್ಯವಾಗುತ್ತದೆ. ಟಿ.ವಿ., ಇಂಟರ್ನೆಟ್ನತ್ತ ಜನರ ಒಲವು ಜಾಸ್ತಿಯಾಗಿ ಪುಸ್ತಕ ಓದುವವರ ಸಂಖ್ಯೆ ಕಡಿಮೆಯಾುತ್ತಿದೆ ಎಂದು ಅವರು ವಿಷಾಧಿಸಿದರು.
ಕುಂದಾಪುರ ದಕ್ಷಿಣ ರೋಟರಿ ಮಾಜಿ ಅಧ್ಯಕ್ಷ ಕೆ.ಪಾಂಡುರಂಗ ಭಟ್, ಮುಕಾಂಬಿಕಾ ಉಡುಪ ಮಾತನಾಡಿದರು. ಪ್ರಾಥಮಿಕ ಮಟ್ಟದಿಂದ ಕಾಲೇಜು ಮಟ್ಟದವರೆಗೂ ವಿದ್ಯಾರ್ಥಿಗಳಿಗಾಗಿ ಪುಸ್ತಕ ಓದಿ ಬಹುಮಾನ ಗೆಲ್ಲಿರಿ ಎಂಬ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಧಿಕಾರಿ ನಳಿನಿ ಜಿ.ಐ. ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಂದಾಪುರ ಶಾಖಾ ಗ್ರಂಥಾ ಲಯದ ಗ್ರಂಥಾಲಯ ಸಹಾಯಕ ಜಗದೀಶ್ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.