ಆ. 4: ಪಿಲಿಕುಳದಲ್ಲಿ ಆಟಿಕೂಟ
ಮಂಗಳೂರು, ಜು.22: ವಿಜಯಾ ಬ್ಯಾಂಕ್ (ಬ್ಯಾಂಕ್ ಆಫ್ ಬರೋಡಾ), ಮಾಂಡೋವಿ ಮೋಟಾರ್ಸ್ ಪ್ರೈ.ಲಿ., ಮಂಗಳೂರು ತಾಲೂಕು ಮಇಳಾ ಮಂಡಲಗಳ ಒಕ್ಕೂಟ, ರೋಟರಿ ಕ್ಲಬ್ ಮತ್ತು ಕಲ್ಕೂರ ಪ್ರತಿಷ್ಠಾನದ ಸಹಯೋಗದೊಂದಿಗೆ ಆ.4ರಂದು ಬೆಳಗ್ಗೆ 10ಗಂಟೆಯಿಂದ ಪಿಲಿಕುಳದ ಗುತ್ತು ಮನೆಯಲ್ಲಿ ಆಟಿಕೂಟವನ್ನು ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮದೊಂದಿಗೆ ಆಯೋಜಿಸಲಾಗಿದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸೀತಾರಾಮ್ ಕುಮಾರ್ ಕಟೀಲ್ ಸಾರಥ್ಯದಲ್ಲಿ ಯಕ್ಷ, ನೃತ್ಯ ಮತ್ತು ಹಾಸ್ಯ ವೈಭವ ಮತ್ತು ಮಂಗಳೂರು ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಸದಸ್ಯರಿಂದ ಆಟಿಯ ಬಗೆ ಬಗೆಯ ವಿಶೇಷ ತಿಂಡಿ ತಿನಿಸುಗಳ ಪ್ರದರ್ಶನ ಹಾಗೂ ಸವಿ ಹಂಚಿಕೆಯ ಕಾರ್ಯಕ್ರಮವೂ ನಡೆಯಲಿದೆ.
ಮಧ್ಯಾಹ್ನ 1ಗಂಟೆಗೆ ಪಿಲಿಕುಳದ ವತಿಯಿಂದ ಆಟಿಯ ನಾನಾ ಬಗೆಯ ಖಾದ್ಯಗಳೊಂದಿಗೆ ವಿಶೇಷ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ವಿಶೇಷ ಭೋಜನದ ಕೂಪನುಗಳನ್ನು ಮಂಗಳೂರಿನ ಮಿನಿ ವಿಧಾನ ಸೌಧದ ಮುಂಭಾಗದ ಸರಕಾರಿ ನೌಕರರ ಭವನದ ಒಂದನೇ ಮಹಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಚೇರಿಯಲ್ಲಿ, ಮಲ್ಲಿಕಟ್ಟೆಯ ಪರಂಪರಾ ಮಳಿಗೆಯಲ್ಲಿ ಹಾಗೂ ಪಿಲಿಕುಳದ ಮುಖ್ಯದ್ವಾರದ ಬಾಕ್ಸ್ ಆಫೀಸಿನಲ್ಲಿಡಲಾಗುವುದು.
ಆಸಕ್ತರು ಈ ಕೂಪನ್ ಪಡೆದು ಆಟಿಕೂಟದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.