‘ವೈದ್ಯರ ಕೊರತೆಯ ಕಾರಣ ಚಿಕಿತ್ಸೆಯನ್ನು ನಿರಾಕರಿಸಬೇಡಿ’
ಉಡುಪಿ ತಾಯಿ-ಮಕ್ಕಳ ಆಸ್ಪತ್ರೆಗೆ ಜಿಲ್ಲಾಧಿಕಾರಿ ಸೂಚನೆ
ಉಡುಪಿ, ಜು.23: ಉಡುಪಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಆಗಮಿಸುವ ಒಳರೋಗಿ/ಹೊರ ರೋಗಿಗಳ ಸಂಖ್ಯೆ ಹೆಚ್ಚಾದಾಗ, ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಯ ಕಾರಣದಿಂದ ಚಿಕಿತ್ಸೆಯನ್ನು ನಿರಾಕರಿಸಿ ವಾಪಸ್ಸು ಕಳುಹಿಸದಂತೆ ಹಾಗೂ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರ ನೇಮಕಾತಿ ಮಾಡಿಕೊಳ್ಳುವುದರ ಜೊತೆಗೆ ತಿಂಗಳಿಗೆ ಕನಿಷ್ಟ 400 ಹೆರಿಗೆಗಳ ಗುರಿಯನ್ನು ಹಾಕಿಕೊಳ್ಳುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದ್ದಾರೆ.
ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಗರದ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನಿರ್ವಹಣೆಯ ಕುರಿತು ನಡೆದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ದಿನದ 24 ಗಂಟೆಯೂ ಗರ್ಭಿಣಿ ಮಹಿಳೆಯರಿಗೆ ಸ್ಕಾನಿಂಗ್ ಸೌಲ್ಯವನ್ನು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒದಗಿಸುವಂತೆ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ಇದಕ್ಕೆ ಸಂಬಂಧಿಸಿದಂತೆ ಜುಲೈ ತಿಂಗಳಲ್ಲಿ ಪೂರ್ಣಾವಧಿ ರೇಡಿಯಾಲಿಜಿಸ್ಟ್ರನ್ನು ನೇಮಕಾತಿ ಮಾಡಿಕೊಳ್ಳುವ ಮೂಲಕ ಈ ಸೌಲ್ಯ ಒದಗಿಸುವುದಾಗಿ ಬಿಆರ್ಎಸ್ ಸಂಸ್ಥೆ ಪರವಾಗಿ ವ್ಯವಸ್ಥಾಪಕರು ಭರವಸೆ ನೀಡಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಅವಧಿ ಪೂರ್ಣ ಹೆರಿಗೆ ಪ್ರಕರಣ ಬಂದಾಗ ಯಾವುದೇ ದಾಖಲೆಗಳು ಇಲ್ಲದಿದ್ದರೂ ಸಹ ಒಳರೋಗಿಯಾಗಿ ದಾಖಲು ಮಾಡಿಕೊಂಡು ಚಿಕಿತ್ಸೆ ನೀಡಬೇಕು. ಚಿಕಿತ್ಸೆಯ ನಂತರದಲ್ಲಿ ದಾಖಲಾತಿಗಳನ್ನು ಪಡೆದುಕೊಳ್ಳುವಂತೆ ಹಾಗೂ ಎಬಿಆರ್ಕೆ ಅಡಿಯಲ್ಲಿ ರೆಪ್ರ್ನ್ನು ಜಿಲ್ಲಾ ಸರ್ಜನ್ ಮುಖಾಂತರ ಮಾಡುವಂತೆ ಜಿಲ್ಲಾಧಿಕಾರಿಗಳು ವ್ಯವಸ್ಥಾಪಕರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಎನ್ಐಸಿಯು ವಿಭಾಗದ ಕಾರ್ಯನಿರ್ವಹಣೆಯ ಕುರಿತು ಚರ್ಚಿಸಿದಾಗ, ಪ್ರಸ್ತುತ ಈ ವಿಭಾಗದಲ್ಲಿ 11 ಹಾಸಿಗೆಗಳು, 3 ವೆಂಟಿಲೇಟರ್ ಗಳು ಸಿದ್ಧವಿದ್ದು, ಈ ವಿಭಾಗದ ಕಾರ್ಯನಿರ್ವಹಣೆಗೆ ಯಾವುದೇ ಸಮಸ್ಯೆ ಗಳಿಲ್ಲ ಎಂದು ಮಕ್ಕಳ ತಜ್ಞ ಡಾ.ಗುರುಪ್ರಸಾದ್ ಮಾಹಿತಿ ನೀಡಿದರು.
ಗರ್ಭಕೋಶ, ಲ್ಯಾಪ್ರೋಸ್ಕೋಪಿಕ್, ಪಿಪಿಐಯುಸಿಡಿ ಚಿಕಿತ್ಸೆಗೆ ಸಂಬಂಧಿ ಸಿದಂತೆ, ಆಸ್ಪತ್ರೆಯವರು ಉದರದರ್ಶಕ ಚಿಕಿತ್ಸೆಗೆ ಅನುಕೂಲ ವಾಗುವಂತೆ ಲ್ಯಾಪ್ರೋಸ್ಕೋಪಿಕ್ ಯಂತ್ರವನ್ನು ಖರೀದಿಸಿದ್ದು, ತಜ್ಞ ವೈದ್ಯಾಧಿಕಾರಿಗಳ ಮುಖಾಂತರ ಈಗಾಗಲೇ ಉದರ ದರ್ಶಕ ಶಿಬಿರವನ್ನು ನಡೆಸುತ್ತಿರುವುದಾಗಿ ವ್ಯವಸ್ಥಾಪಕರು ಸಭೆಗೆ ತಿಳಿಸಿದರು.
ಪಿಪಿಐಸಿಡಿ ಕಾರ್ಯಕ್ರಮದಡಿಯಲ್ಲಿ ಹೆರಿಗೆ ನಂತರ ವೆಂಕಿ ಅಳವಡಿಸುವ ಕಾರ್ಯಕ್ರಮದ ಪ್ರಗತಿ ಕುಂಠಿತವಾಗಿದ್ದು, ಈ ಬಗ್ಗೆ ಕ್ರಮವಹಿಸುವಂತೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಸಾರ್ವಜನಿಕ ಆಸ್ಪತ್ರೆ ಕುಂದಾಪುರ ಮತ್ತು ಕಾರ್ಕಳ ಆಸ್ಪತ್ರೆಯಲ್ಲಿ ಈಗಾಗಲೇ ಎನ್ಆರ್ಸಿ ವಿಭಾಗ ಪ್ರಾರಂಭವಾಗಿದ್ದು, ಉಡುಪಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಈ ಸೇವೆಯನ್ನು ಪ್ರಾರಂಭಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಪ್ರಸ್ತಾಪಿಸಿ ದಾಗ, ಸೆಪ್ಟಂಬರ್ ತಿಂಗಳಿ ನಿಂದ ಈ ಸೇವೆಯನ್ನು ಪ್ರಾರಂಭಿಸುವುದಾಗಿ ಆಸ್ಪತ್ರೆಯ ವ್ಯವಸ್ಥಾಪಕರು ಸಭೆಗೆ ಮಾಹಿತಿ ನೀಡಿದರು.
ಉಡುಪಿ ಜಿಲ್ಲೆಯ ಇತರೆ ಆಸ್ಪತ್ರೆಗಳಿಂದ ಗರ್ಭಿಣಿಯರನ್ನು ಮಾಹಿತಿ ನೀಡದೆ ನಮ್ಮ ಆಸ್ಪತ್ರೆಗೆ ಶಿಫಾರಸು ಮಾಡುತ್ತಿದ್ದು, ಇದರಿಂದ ಸಕಾಲದಲ್ಲಿ ಸೇವೆ ನೀಡಲು ಕಷ್ಟವಾಗುತ್ತಿದೆ ಎಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವ್ಯವಸ್ಥಾಪಕರು ಸಭೆಗೆ ತಿಳಿಸಿದಾಗ, ಈ ಬಗ್ಗೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಉಡುಪಿ ಜಿಲ್ಲೆಯ ಎಲ್ಲಾ ಸರಕಾರಿ ಆಸ್ಪತ್ರೆಗಳ ವೈದ್ಯಾಧಿಕಾರಿಗಳು ಮತ್ತು ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಯ ಕರ್ತವ್ಯ ನಿರತ ವೈದ್ಯರನ್ನು ಒಳಗೊಂಡಂತೆ ಒಂದು ವಾಟ್ಸ್ಆಪ್ ಗ್ರೂಪ್ನ್ನು ರಚಿಸುವಂತೆ ಸಮಿತಿಯ ಸದಸ್ಯರಿಗೆ ಸೂಚಿಸಿದರು.
ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ದಾಖಲಾತಿಗೆ ಬಂದಂತಹ ಕೆಲವರಲ್ಲಿ 18 ವರ್ಷದ ಒಳಗಿನ ಕೆಲವರು ಗುರುತಿನ ಚೀಟಿಯಿಲ್ಲದೆ ದಾಖಲಾಗಿ ನಂತರದಲ್ಲಿ ತಲೆಮರೆಸಿಕೊಳ್ಳುತ್ತಿದ್ದು, ಇದರಿಂದ ಪ್ರಕರಣ ನಿರ್ವಹಣೆ ಕಷ್ಟವಾಗುತ್ತಿದೆ ಎಂದು ವ್ಯವಸ್ಥಾಪಕರು ದೂರಿದರು. ಇಂತಹ ಪ್ರಕರಣ ದಾಖಲಾದಲ್ಲಿ ಆಸ್ಪತ್ರೆಯ ಸಿಸಿಟಿವಿ ಪ್ರತಿಯೊಂದಿಗೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಬೆಯಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ (ವೈದ್ಯಕೀಯ) ಡಾ.ಜಗದೀಶ್, ಮೈಸೂರು ವಿಭಾಗೀಯ ಜಂಟಿ ನಿರ್ದೇಶಕ ಡಾ. ರಾಮಚಂದ್ರ ಬಾಯರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಜಿ.ರಾಮ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಧುಸೂದನ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.
ಸಭೆಯಲ್ಲಿ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ (ವೈದ್ಯಕೀಯ) ಡಾ.ಜಗದೀಶ್, ಮೈಸೂರು ಎಂ.ಜಿ.ರಾಮ,ಜಿಲ್ಲಾಶಸ್ತ್ರಚಿಕಿತ್ಸಕಡಾ.ಮುಸೂದನ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.