ಸುರತ್ಕಲ್: ಮಳೆ ನೀರು ಕೊಯ್ಲು ಯೋಜನೆಗೆ ಚಾಲನೆ
ಮಂಗಳೂರು, ಜು.23: ಜೆಸಿಐ ಸುರತ್ಕಲ್ ವತಿಯಿಂದ ಸುರತ್ಕಲ್ನ ಅನುದಾನಿತ ವಿದ್ಯಾದಾಯಿನಿ ಪ್ರೌಢಶಾಲೆಯಲ್ಲಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿ ಬಾವಿಗೆ ನೀರು ಹರಿಸಿ ಜಲ ಮರುಪೂರಣಗೊಳಿಸುವ ಯೋಜನೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ನಿರ್ಮಿತಿ ಕೇಂದ್ರದ ಪ್ರೊಜೆಕ್ಟ್ ಡೈರೆಕ್ಟರ್ ರಾಜೇಂದ್ರ ಕಲ್ಬಾವಿ ಮೇಲ್ಚಾವಣಿಯ ನೀರನ್ನು ಫಿಲ್ಟರ್ ಮೂಲಕ ಬಾವಿಗೆ ಹಾಕುವುದರ ಮೂಲಕ ಅತ್ಯಂತ ಸುಲಭವಾಗಿ ಜಲ ಮರುಪೂರಣವನ್ನು ಮಾಡಬಹುದು. ಈ ಮೂಲಕ ಮುಂದಿನ ದಿನಗಳಲ್ಲಿ ಬರುವ ಜಲಕ್ಷಾಮದ ಸಾಧ್ಯತೆಯನ್ನು ತಡೆಯಬಹುದು ಎಂದರು.
ಜೆಸಿಐ 15ರ ವಲಯಾಧ್ಯಕ್ಷ ಅಶೋಕ್ ಚೂಂತಾರ್ ನೀರಿನ ಅಭಾವ ಸೃಷ್ಟ್ಟಿಯಾಗಿರುವ ಈ ಸಂದರ್ಭ ಶಾಲೆಯ ಆವರಣದಲ್ಲಿ ಯೋಜನೆಯನ್ನು ಸ್ಥಾಪಿಸಿ, ಶಾಲಾ ಮಕ್ಕಳಿಗೂ ವಿದ್ಯಾರ್ಥಿ ದೆಸೆಯಲ್ಲಿಯೇ ಯೋಜನೆಯ ಮಹತ್ವವನ್ನು ನೀಡುವ ಕೆಲಸವನ್ನು ಜೆಸಿಐ ಸುರತ್ಕಲ್ ಮಾಡಿದೆ ಎಂದು ಶ್ಲಾಘಿಸಿದರು.
ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಎಂ.ವೆಂಕಟರಾವ್, ಜೊತೆ ಕಾರ್ಯದರ್ಶಿ ಟಿ.ಎನ್. ರಮೇಶ್, ಜೆಸಿಐ ವಲಯ ಉಪಾಧ್ಯಕ್ಷ ರೋಯನ್ ಉದಯ್ ಕ್ರಾಸ್ತಾ, ವಲಯಾಧ್ಯಕ್ಷರ ಆಪ್ತ ಕಾರ್ಯದರ್ಶಿ ರಕ್ಷಿತ್ ಕುಡುಪು, ಮುಖ್ಯಶಿಕ್ಷಕ ಬಾಲಚಂದ್ರ, ಕಾರ್ಯಕ್ರಮದ ನಿರ್ದೇಶಕ ಎಂ.ಜಿ. ರಾಮಚಂದ್ರ ರಾವ್, ಜೆಸಿಐ ನಿಕಟಪೂರ್ವಾಧ್ಯಕ್ಷ ಪ್ರೀಣ್ ಶೆಟ್ಟಿ, ಜೆಸಿರೇಟ್ ಅಧ್ಯಕ್ಷೆ ಅನಿತಾ ಶಶಿಕುಮಾರ್, ಪೂರ್ವಾಧ್ಯಕರಾದ ಗುಣವತಿ ರಮೇಶ್, ಸೀತಾರಾಮ ರೈ, ವಿನೀತ್ ಶೆಟ್ಟಿ, ನಿರಂಜನ್ ಬಾಳ, ಜೆಸಿಐ ವಲಯ 15ರ ಶೋಭಾ ಅಶೋಕ್ ಮತ್ತಿತರರು ಉಪಸ್ಥಿತರಿದ್ದರು.
ಜೆಸಿಐ ಅಧ್ಯಕ್ಷ ಲೋಕೇಶ ರೈ ಸ್ವಾಗತಿಸಿದರು. ಉಪಾಧ್ಯಕ್ಷ ರಾಕೇಶ್ ಹೊಸಬೆಟ್ಟು ವಂದಿಸಿದರು.