ಪಡುಬಿದ್ರಿ: ವಿದ್ಯಾರ್ಥಿವೇತನ ಶಿಬಿರ, ಪ್ರತಿಭಾ ಪುರಸ್ಕಾರ
ಪಡುಬಿದ್ರಿ: ಯೂತ್ ಫೌಂಡೇಶನ್ ಪಡುಬಿದ್ರಿ ಆಯೋಜಿಸಿದ ವಿದ್ಯಾರ್ಥಿ ವೇತನ ಮಾಹಿತಿ ಕಾರ್ಯಕ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಪಡುಬಿದ್ರಿಯ ಸಾಯಿ ಆರ್ಕೆಡ್ನಲ್ಲಿ ಶನಿವಾರ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಶಿಕ್ಷಣದಿಂದ ಸಮಾಜ ಬದಲಾವಣೆ ಸಾಧ್ಯ. ವಿದ್ಯಾರ್ಥಿಗಳು ತಮ್ಮ ಮುಂದಿನ ಶಿಕ್ಷಣದ ಬಗ್ಗೆ ಚಿಂತಿಸಿ ಮುಂದಡಿ ಇಡಬೇಕು. ಇತ್ತೀಚಿನ ದಿನಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಇಲಾಖೆ ಗಳಿಂದ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಹಲವು ವಿದ್ಯಾರ್ಥಿ ವೇತನಗಳಿವೆ. ಅದರ ಸವಲತ್ತುಗಳನ್ನು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ಶಿಕ್ಷಣ ತಜ್ಞ ಹಾಜಿ ಎಸ್.ಎ. ರಹಮಾನ್ ಮಾತನಾಡಿ, ಶಿಕ್ಷಣ ಪಡೆಯುವುದರಿಂದ ತಮ್ಮ ಮುಂದಿನ ಯೋಜನೆಗಳ ಬಗ್ಗೆ ಕನಸು ಕಾಣಬೇಕು. ಶಿಕ್ಷಣ ಪಡೆಯುವ ವೇಳೆ ಒತ್ತಡಕ್ಕೆ ಒಳಗಾಗದೆ ಓದಿನ ಬಗ್ಗೆ ಆಸಕ್ತಿ ವಹಿಸಿ ಎಂದು ಕರೆ ನೀಡಿದರು.
ನಾಸಿರ್ ಉಸ್ತಾದ್ ದುವಾ ನೆರವೇರಿಸಿದರು. ಯೂತ್ಫೌಂಡೇಶನ್ ಅಧ್ಯಕ್ಷ ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯ ಹಸನ್ ಬಾವ, ಬುಡಾನ್ ಬಾಷಾ, ಬೈಕಂಪಾಡಿ ಮ್ಯಾನ್ಮೆಟ್ ಎಂಜಿನಿಯರಿಂಗ್ನ ಮ್ಯಾನೇಜರ್ ಮುನೀರುದ್ದೀನ್ ಉಪಸ್ಥಿತರಿದ್ದರು.
ಪ್ರತಿಭಾ ಪುರಸ್ಕಾರ: ಇದೇ ವೇಳೆ ಎಸ್ಎಸ್ಎಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಪಡುಬಿದ್ರಿ ಜಮಾಅತ್ ವ್ಯಾಪ್ತಿಯಲ್ಲಿ ಪ್ರಥಮ ಸ್ಥಾನ ಪಡೆದ ಮೂಳೂರು ಅಲ್ ಇಹ್ಸಾನ್ ಶಾಲೆಯ ಮುಹಮ್ಮದ್ ಸಿದ್ದೀಕ್, ಮುಲ್ಕಿ ನಾರಾಯಣ ಗುರು ಪಿಯು ಕಾಲೇಜಿನ ಫಾತಿಮಾ ಶಯಿಫಾ ಅವರಿಗೆ ಮರ್ಹೂಂ ಹಾಜಿ ಎಸ್.ಎ.ರಝಾಕ್ ಮಾಸ್ಟರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ನೂರುಲ್ ಹುದಾ ಮದರಸದ ಐದನೇ ತರಗತಿಯ ನಿಝಾ ಫಾತಿಮಾ, ಏಳನೇ ತರಗತಿಯ ಆಯಿಷಾ ಶೈಮಾ ಅವರಿಗೆ ಮರ್ಹೂಂ ಹಾಜಿ ಪಿ.ಕೆ. ಮುಹಿಯುದ್ದೀನ್ ಮುಸ್ಲಿಯಾರ್ ಪ್ರಶಸ್ತಿ ಹಾಗೂ 10ನೇ ತರಗತಿಯ ಅಝ್ವಿನಾ ಅವರಿಗೆ ಮರ್ಹೂಂ ಹಾಜಿ ಅಬ್ದುಲ್ ರಹ್ಮಾನ್ ಮುಸ್ಲಿಯಾರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಾಹಿತಿ ಶಿಬಿರ: ಆಲ್ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ನ ಯೋಜನಾ ಸಂಯೋಜಕ ಮಸ್ಜಿದ್ ಒನ್ ಕೌನ್ಸಿಲ್ನ ಅಬ್ದುಲ್ ಖಾದರ್ ಅಲ್ಪಸಂಖ್ಯಾತ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಸಿಗುವ ವಿದ್ಯಾರ್ಥಿ ವೇತನದ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮವನ್ನು ರೋಟರಿ ವಲಯ ಸೇನಾನಿ ರಮೀಝ್ ಹುಸೈನ್ ಉದ್ಘಾಟಿಸಿದರು. ಗೌರವಾಧ್ಯಕ್ಷ ಹಸನ್ ಬಾವ, ಉಪಾಧ್ಯಕ್ಷ ಎಂ.ಎಸ್. ಮನ್ಸೂರ್, ಉರ್ದು ಶಾಲೆಯ ಅಭಿವೃದ್ಧಿ ಸಮಿತಿಯ ಅಕ್ಬರ್, ನಿಯಾಝ್ ಉಪಸ್ಥಿತರಿದ್ದರು.