ನೀರಿನ ಕೊರತೆಯಿಂದ ಎಂಆರ್ಪಿಎಲ್ ಆದಾಯಕ್ಕೆ ಹೊಡೆತ: ಶಶಿಶಂಕರ್
ಪ್ರಥಮ ತ್ರೈಮಾಸಿಕದಲ್ಲಿ 500 ಕೋಟಿ ರೂ. ನಷ್ಟ
ಮಂಗಳೂರು, ಆ.3: ಮಂಗಳೂರಿನಲ್ಲಿರುವ ಕೇಂದ್ರ ಸರಕಾರದ ಸ್ವಾಮ್ಯದ ಓಎನ್ಜಿಸಿಯ ಅಂಗ ಸಂಸ್ಥೆಯಾದ ಎಂಆರ್ಪಿಎಲ್ ತೈಲ ಕಂಪೆನಿ ಈ ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ 500 ಕೋಟಿ ರೂ. ನಷ್ಟ ಅನುಭವಿಸಿದೆ. ಕಳೆದ ಬೇಸಿಗೆಯಲ್ಲಿ ನೀರಿನ ಕೊರತೆಯಿಂದ ಎಂಆರ್ಪಿಎಲ್ನ ವಿವಿಧ ಘಟಕಗಳು ಅನಿವಾರ್ಯವಾಗಿ ಸ್ಥಗಿತಗೊಂಡ ಕಾರಣ ಈ ವರ್ಷದ ಪ್ರಥಮ ತ್ರೈಮಾಸಿಕದಲ್ಲಿ ಎಂದು ಕಂಪನಿ ನಷ್ಟ ಅನುಭವಿಸಬೇಕಾಯಿತು ಎಂದು ಓಎನ್ಜಿಸಿಯ ಅಧ್ಯಕ್ಷ ಶಶಿಶಂಕರ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕಳೆದ ಆರ್ಥಿಕ ವರ್ಷದಲ್ಲಿ ಎಂಆರ್ಪಿಎಲ್ 362 ಕೋಟಿ ರು. ನಿವ್ವಳ ಲಾಭ ಗಳಿಸಿತ್ತು. ಕಳೆದ ಅವಧಿಯಲ್ಲಿ ಕಂಪನಿಯು 16,583 ಕೋಟಿ ರೂ. ಒಟ್ಟು ಆದಾಯ ಹೊಂದಿದ್ದು, ಅದು ಈ ಸಾಲಿನಲ್ಲಿ 11,200 ಕೋಟಿ ರೂ.ಗೆ ಇಳಿಕೆಯಾಗಿದೆ. ಬೇಸಿಗೆ ತಿಂಗಳ 45 ದಿನಗಳ ಕಾಲ ವಿಪರೀತ ನೀರಿನ ತೊಂದರೆ ಅನುಭವಿಸಿದ ಕಾರಣ ಕೆಲವು ಘಟಕಗಳನ್ನು ಸ್ಥಗಿತಗೊಳಿಸಲಾಯಿತು ಎಂದರು.
ಬೇಸಿಗೆಯಲ್ಲಿ ನದಿ ನೀರಿನ ಮೇಲೆ ಅವಲಂಬನೆ ಕಡಿಮೆ ಮಾಡುವುದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆಯಿಂದ ಪಡೆಯುತ್ತಿರುವ ಒಳಚರಂಡಿಯ ತ್ಯಾಜ್ಯ ನೀರಿನ ಪ್ರಮಾಣವನ್ನು 3.5 ಎಂಜಿಡಿಯಿಂದ 5 ಎಂಜಿಡಿಗೆ ಏರಿಸಲು ಉದ್ದೇಶಿಸಲಾಗಿದೆ. ಅಲ್ಲದೆ ತುಂಬೆ ಡ್ಯಾಂನಲ್ಲಿ 7 ಮೀಟರ್ ನೀರು ನಿಲ್ಲಿಸುವುದಕ್ಕೆ ಜಿಲ್ಲಾಡಳಿತವನ್ನು ಒತ್ತಾಯಿಸಲಾಗುವುದು. ಮುಳುಗಡೆ ಸಂತ್ರಸ್ತರಿಗೆ ಪರಿಹಾರ ಪಾವತಿ ವಿಚಾರದಲ್ಲಿ ನೆರವಾಗುವ ಬಗ್ಗೆ ಜಿಲ್ಲಾಡಳಿತ ಜೊತೆಗೆ ಚರ್ಚೆ ನಡೆಸಲಾಗುವುದು ಎಂದರು.
ಇರಾನ್ನಿಂದ ಕಚ್ಚಾ ತೈಲ ದುಬಾರಿ ಆಮದಿನಿಂದ ಇಲ್ಲಿನ ತೈಲ ಸಂಸ್ಕರಣೆ ಮೇಲೆ ಪರಿಣಾಮ ಉಂಟಾಗಿದೆ. ಆದ್ದರಿಂದ ಇರಾನ್ನಿಂದ ತೈಲ ಆಮದನ್ನು ಕಡಿಮೆ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸೆಪ್ಟೆಂಬರ್ ವೇಳೆಗೆ ಯುನೈಟೆಡ್ ಸ್ಟೇಟ್ಸ್ನಿಂದ ಕಚ್ಚಾ ತೈಲ ಆಮದಾಗಲಿದೆ ಎಂದರು.
ಮಾರ್ಚ್ಗೆ ತಾತ್ಕಾಲಿಕ ಸ್ಥಾವರ
ತಣ್ಣೀರುಬಾವಿಯಲ್ಲಿ 620 ಕೋಟಿ ರು. ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಉಪ್ಪು ನೀರು ಸಂಸ್ಕರಣ ಸ್ಥಾವರ 2020ರ ಸೆಪ್ಟೆಂಬರ್ ವೇಳೆಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ. ಅಲ್ಲಿವರೆಗೆ ತಾತ್ಕಾಲಿಕ ಸ್ಥಾವರದ ಉಪಯೋಗ ಪಡೆಯಲಾಗುವುದು ಎಂದರು.
ಈ ಬಾರಿಯಂತೆ ಮುಂದಿನ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕ ನೆಲೆಯಲ್ಲಿ ಉಪ್ಪು ನೀರಿನ ಸಂಸ್ಕರಣೆ ಮಾಡಿ ನೀರು ಒದಗಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಈ ತಾತ್ಕಾಲಿಕ ಘಟಕಗಳು ಮಾರ್ಚ್ನಲ್ಲಿ ಕಾರ್ಯನಿರ್ವಹಣೆ ಪ್ರಾರಂಭಿಸಲಿದೆ ಎಂದು ಎಂಆರ್ಪಿಎಲ್ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ್ ತಿಳಿಸಿದರು.
ಸುದ್ದಿಗತೋಷ್ಠಿಯಲ್ಲಿ ಎಂಆರ್ಪಿಎಲ್ನ ರಿಫೈನರಿ ನಿರ್ದೇಶಕ ವಿನಯ ಕುಮಾರ್, ಜಿಎಂ ಪ್ರಶಾಂತ್ ಬಾಳಿಗ ಉಪಸ್ಥತರಿದ್ದರು.