ಅಕ್ರಮ ಗೋ ಸಾಗಾಟ, ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ: ದ.ಕ. ಜಿಲ್ಲಾಧಿಕಾರಿ
ಬಕ್ರೀದ್ ಹಿನ್ನೆಲೆ
ಮಂಗಳೂರು, ಆ. 6: ಬಕ್ರೀದ್ ಅನ್ನು ಸೌಹಾರ್ದತೆಯಿಂದ ನಡೆಸುವ ನಿಟ್ಟಿನಲ್ಲಿ ಅಕ್ರಮ ಗೋ ಸಾಗಾಟ ಹಾಗೂ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಾರೆಂಬ ಗುಮಾನಿ ಮೇಲೆ ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಎಚ್ಚರಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಧರ್ಮದ ಭಾವನೆಗಳನ್ನು ಪರಸ್ಪರರು ಅರ್ಥ ಮಾಡಿಕೊಂಡು ಹಬ್ಬಗಳನ್ನು ಆಚರಿಸುವ ಜಿಲ್ಲೆ ದಕ್ಷಿಣ ಕನ್ನಡ. ಹಾಗಾಗಿ ಬಕ್ರೀದ್ ಕೂಡಾ ಉತ್ತಮವಾಗಿ ನಡೆಯಬೇಕೆಂಬುದು ನಮ್ಮ ಆಶಯ ಎಂದರು.
ಬಕ್ರೀದ್ ಸಂದರ್ಭ ಗೋ ಸಾಗಾಟದ ಬಗ್ಗೆ ಸಮಸ್ಯೆಗಳಿರುತ್ತವೆ. ಹಾಗಾಗಿ ಈ ಬಗ್ಗೆ ಪರಿಶೀಲನೆ ಹಾಗೂ ಕ್ರಮಕ್ಕೆ ಅಧಿಕಾರಿಗಳು ನಾವಿದ್ದೇವೆ. ಯಾರೂ ಕಾನೂನು ಕೈಗೆತ್ತಿಕೊಳ್ಳಬಾರದು. ಅಕ್ರಮ ಸಾಗಾಟದ ಬಗ್ಗೆ ಸಂಶಯವಿದ್ದಾಗ 1077 ಅಥವಾ 100 ಸಹಾಯವಾಣಿಗೆ ಕರೆ ಮಾಡಿ ದೂರು ನೀಡಬಹುದು. ಅದು ಬಿಟ್ಟು ಗ್ರೂಪಿಸಂ ಅಥವಾ ಕಾನೂನು ಕೈಗೆತ್ತಿಕೊಳ್ಳುವವರನ್ನು ಸಹಿಸಲಾಗದು ಎಂದು ಜಿಲ್ಲಾಧಿಕಾರಿ ಹೇಳಿದರು.
ಗೋ ಸಾಗಾಟಕ್ಕಾಗಿ ಲೈವ್ಸ್ಟಾಕ್ ಲಾಜಿಸ್ಟಿಕ್ ಕಂಟ್ರೋಲ್ ಆ್ಯಪ್
ಗೋ ಸಾಗಾಟದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತದ ವತಿಯಿಂದ ಲೈವ್ ಸ್ಟಾಕ್ ಲಾಜಿಸ್ಟಿಕ್ ಎಂಬ ಆ್ಯಪನ್ನು ರೂಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ತಿಳಿಸಿದರು.
ಮೊಬೈಲ್ ಆಧಾರಿತ ಈ ಆ್ಯಪನ್ನು ಗೋ ಸಾಗಾಟಗಾರರು ಡೌನ್ಲೋಡ್ ಮಾಡಿಕೊಂಡು ಗೋ ಸಾಗಾಟಕ್ಕೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸಬಹುದು. ಇದು ಇದು ಯಾವುದೇ ರೀತಿಯಲ್ಲಿ ಗೋ ಸಾಗಾಟಕ್ಕೆ ಸಮ್ಮತಿ ಅಲ್ಲ. ಆದರೆ ಸಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಖಾತರಿ ಪಡಿಸಲು ಸಾಗಾಟದಾರರು ನೀಡುವ ಮಾಹಿತಿಯಾಗಿರುತ್ತದೆ. ಸದ್ಯ ಮಾಹಿತಿಯನ್ನು ನೀಡವುದಕ್ಕಾಗಿ ಮಾತ್ರವೇ ಈ ಆ್ಯಪ್ ಬಳಕೆಯಾಗಲಿದ್ದು, ಮುಂದೆ ಈ ಆ್ಯಪ್ನಲ್ಲಿ ಜಿಪಿಎಸ್ ಸಹಾಯದಿಂದ ವಾಹನಗಳ ಸಾಗಾಟದ ಮೇಲೆ ನಿಗಾ ವಹಿಸುವಂತಹ ಇತರ ಸೌಲಭ್ಯಗಳಿಗೂ ಸಹಕಾರಿಯಾಗಲಿದೆ. ಮಾತ್ರವಲ್ಲದೆ, ಸಾಗಾಟಕ್ಕೆ ಸಂಬಂಧಿಸಿದ ದಾಖಲೆಗಳನ್ನು, ಫೋಟೋಗಳನ್ನು ಕೂಡಾ ಇದರಲ್ಲಿ ಅಪ್ಲೋಡ್ ಮಾಡುವ ವ್ಯವಸ್ಥೆ ಮಾಡಲಾಗುವುದು. ಈ ಬಗ್ಗೆ ಈಗಾಗಲೇ ಸಾಗಾಟ ಮಾಡುವವರನ್ನು ಕರೆಯಿಸಿ ಮಾತುಕತೆ ನಡೆಸಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಮಾಹಿತಿ ಒದಗಿಸುವುದು ಕಡ್ಡಾಯವಲ್ಲದಿದ್ದರೂ, ಸಾಗಾಟಗಾರರಿಂದಲೇ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈ ವ್ಯವಸ್ಥೆಯನ್ನು ರೂಪಿಸುತ್ತಿದೆ. ಇದರಿಂದಾಗಿ ಕಾನೂನು ರೀತಿಯಲ್ಲಿ ಗೋವುಗಳ ಸಾಗಾಟ ಮಾಡುವವರು ಎಲ್ಲಿಂದ ಎಲ್ಲಿಗೆ, ಯಾರಿಂದ ಗೋವುಗಳನ್ನು ಸಾಗಾಟ ಮಾಡುತ್ತಾರೆ ಎಂಬ ಮಾಹಿತಿಯು ಈ ಆ್ಯಪ್ ಮೂಲಕ ಸಂಬಂಧಪಟ್ಟ ಅಧಿಕಾರಿಗಳಿಗೆ ರವಾನೆಯಾಗುತ್ತದೆ. ಕಾನೂನು ಬದ್ಧವಾಗಿ ಸಾಗಾಟ ಮಾಡುವವರಿಗೆ ಇದರಿಂದ ಸಹಕಾರಿಯಾಗಲಿದೆ. ಸದ್ಯ ನಾಳೆಯಿಂದ ಲಿಂಕ್ ಮೂಲಕ ಸಾಗಾಟಗಾರರಿಗೆ ಈ ಆ್ಯಪ್ ಲಭ್ಯವಾಗಲಿದ್ದು, ಎರಡು ದಿನಗಳಲ್ಲಿ ಪ್ಲೇ ಸ್ಟೋರ್ ಮೂಲಕ ಡೌನ್ಲೋಡ್ ಮಾಡುವ ಅವಕಾಶ ದೊರೆಯಲಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಮನಪಾ ಆಯುಕ್ತ ಮುಹಮ್ಮದ್ ನಝೀರ್ ಉಪಸ್ಥಿತರಿದ್ದರು.
ದೂರುಗಳಿಗೆ ತಕ್ಷಣ ಕ್ರಮ: ಎಸ್ಪಿ
ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಬಕ್ರೀದ್ ಹಿನ್ನೆಲೆಯಲ್ಲಿ 24 ಗಂಟೆಯೂ ಗಸ್ತು ವಾಹನಗಳನ್ನು ನಿಯೋಜಿಸಲಾಗಿದೆ. ಏನೇ ದೂರುಗಳಿದ್ದರೂ ತಕ್ಷಣ ಸ್ಪಂದಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್ ತಿಳಿಸಿದರು.
ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಗೋ ಕಳ್ಳತನದ 6 ಪ್ರಕರಣಗಳು ದಾಖಲಾಗಿದ್ದು, 5 ಪ್ರಕರಣಗಳು ಪತ್ತೆಯಾಗಿವೆ. ಅಕ್ರಮ ಸಾಗಾಟಕ್ಕೆ ಸಂಬಂಧಿಸಿ 19 ಪ್ರಕರಣಗಳು ದಾಖಲಾಗಿದ್ದರೆ, ಗೋ ಹತ್ಯೆಗೆ ಸಂಬಂಧಿಸಿ 12 ಪ್ರಕರಣಗಳು ದಾಖಲಾಗಿವೆ. ಬಕ್ರೀದ್ ಹಿನ್ನೆಲೆಯಲ್ಲಿ ಅಪರಾಧ ಹಿನ್ನೆಲೆಯ 89 ಮಂದಿಯನ್ನು ಕರೆಯಿಸಿ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದರು.