ಉಳ್ಳಾಲ ಸೋಮೇಶ್ವರದಲ್ಲಿ ಕಡಲ್ಕೊರೆತ ತೀವ್ರ
ಉಳ್ಳಾಲ, ಆ.7: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ಉಳ್ಳಾಲ, ಸೋಮೇಶ್ವರ, ಉಚ್ಚಿಲದಲ್ಲಿ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದು, ಈ ಪ್ರದೇಶಗಳಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಬೆಟ್ಟಂಪಾಡಿ ಪ್ರದೇಶದಲ್ಲಿ ಹಲವು ತೆಂಗು, ಮರಗಳು ಸಮುದ್ರಪಾಲಾಗಿವೆ.
ಸೋಮೇಶ್ವರದಲ್ಲಿ ಅಲೆಗಳ ಅಬ್ಬರಕ್ಕೆ ಸಿಲುಕಿ ತಡೆಗೋಡೆ ಬಿರುಕು ಬಿಟ್ಟಿದೆ ಎಂದು ಹೇಳಲಾಗಿದೆ.
ಉಚ್ಚಿಲ ಬೆಟ್ಟಂಪಾಡಿಯಲ್ಲಿ ಸಮುದ್ರದ ಅಲೆಗಳು ರಸ್ತೆಯವರೆಗೆ ನುಗ್ಗಿದೆ. ಇದರಿಂದ ರಸ್ತೆಗೆ ಹಾನಿಯುಂಟಾಗಿದ್ದು, ಸಂಚಾರಕ್ಕೆ ತೊಡಕುಂಟಾಗಿದೆ. ಸೋಮೇಶ್ವರ ಪೇರಿಬೈಲು ಎಂಬಲ್ಲಿ ಮೋಹನ್ ಎಂಬವರ ಮನೆಯ ಹಿಂಭಾಗಕ್ಕೆ ಸಮುದ್ರದ ದ ಭಾರೀ ಅಲೆಗಳು ಅಪ್ಪಳಿಸುತ್ತಿವೆ. ಇದರಿಂದ ಮನೆ ಸಮುದ್ರಪಾಲಾಗುವ ಭೀತಿ ಎದುರಾಗಿದೆ. ಸ್ಥಳಕ್ಕೆ ಸೋಮೇಶ್ವರ ಪುರಸಭಾಧ್ಯಕ್ಷ ರಾಜೇಶ್ ಉಚ್ಚಿಲ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.